ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಕಾನನದಲ್ಲಿ ಆಗಾಗ ಸುರಿಯುತ್ತಿರುವ ಮಳೆಗೆ ಭುವಿಯಲ್ಲಿ ಹುದುಗಿದ್ದ ಕಪ್ಪೆಗಳು ಹೊರ ಬಂದಿವೆ. ಇವುಗಳ ಆಗಮನ ಸ್ಥಳೀಯರಲ್ಲಿ ಕುತೂಹಲ ಹುಟ್ಟಿಸಿದೆ.
ದೇಹ ಕಡು ಕಪ್ಪು ಮತ್ತು ಕೆಂಪು ಬಣ್ಣದಿಂದ ಕಂಗೊಳಿಸುತ್ತಿದೆ. ಬಹುತೇಕ ಮುಂಗಾರು ಆರಂಭದೊಂದಿಗೆ ಸಣ್ಣ ಗಾತ್ರದ ಕಪ್ಪೆಗಳು ಇಣುಕುತ್ತವೆ. ಆದರೆ, ಈ ಬಾರಿ ರಾತ್ರಿಯ ಸಮಯ ದೊಡ್ಡ ದೊಡ್ಡದಾದ ಕಪ್ಪೆಗಳು ಆಹಾರ ಮೆಲ್ಲುತ್ತ ಕುಳಿತಿರುವುದನ್ನು ಬೇಲಿ ಬದಿಯಲ್ಲಿ ಕಾಣಬಹುದಾಗಿದೆ.
ಭಾರತದ ಕಪ್ಪೆಗಳಲ್ಲಿ ಅತ್ಯಂತ ದೊಡ್ಡದಾದ ಇಂಡಿಯನ್ ಬುಲ್ ಫ್ರಾಗ್ಗಳು ಇಲ್ಲಿ ಕಂಡುಬಂದಿತ್ತು. ಕಳೆದ ಹಲವು ವರ್ಷಗಳಿಂದ ಇವು ಕಂಡು ಬಂದಿರಲಿಲ್ಲ. ಮಳೆಗಾಲದಲ್ಲಿ ವಂಶೋದ್ಧಾರದ ಸಮಯದಲ್ಲಿ ಅವುಗಳ ಮೈ ಬಣ್ಣ ಪ್ರಖರ ಹಳದಿ ವರ್ಣಕ್ಕೆ ತಿರುಗುತ್ತದೆ. ಆದರೆ, ಈಗ ಕಂಡು ಬಂದಿರುವುದು ಸಾಮಾನ್ಯ ಬಣ್ಣದಲ್ಲಿದ್ದು, ದಪ್ಪವಾಗಿವೆ ಎಂದು ಅಶೋಕ್ ಪರಿಸರ ಸಂರಕ್ಷಣಾ ಸಂಸ್ಥೆ (ಏಟ್ರೀ) ಸಹಾಯಕ ನಾಗೇಂದ್ರ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.