ADVERTISEMENT

ಮೈಸೂರು: ಬಿಜೆಪಿ 'ಜನಾಕ್ರೋಶ ಯಾತ್ರೆ' ಆರಂಭ– ಮುನಿಸು ಮರೆತ ಬಣಗಳು!

16 ದಿನಗಳ 'ಜನಾಕ್ರೋಶ ಯಾತ್ರೆ'ಗೆ ನೆಹರು ವೃತ್ತದಲ್ಲಿ ಸೋಮವಾರ ಚಾಲನೆ ದೊರಕಿತು.

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 14:49 IST
Last Updated 7 ಏಪ್ರಿಲ್ 2025, 14:49 IST
<div class="paragraphs"><p>ಮೈಸೂರು: ಬಿಜೆಪಿ 'ಜನಾಕ್ರೋಶ ಯಾತ್ರೆ' ಆರಂಭ</p></div>

ಮೈಸೂರು: ಬಿಜೆಪಿ 'ಜನಾಕ್ರೋಶ ಯಾತ್ರೆ' ಆರಂಭ

   

ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ, ಮುಸ್ಲಿಮರ ಓಲೈಕೆ, ದಲಿತರ ಹಣ ಲೂಟಿ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಕೈಗೊಂಡಿರುವ 16 ದಿನಗಳ 'ಜನಾಕ್ರೋಶ ಯಾತ್ರೆ'ಗೆ ನೆಹರು ವೃತ್ತದಲ್ಲಿ ಸೋಮವಾರ ಚಾಲನೆ ದೊರಕಿತು.

ಮುಖ್ಯಮಂತ್ರಿ‌ ಸಿದ್ದರಾಮಯ್ಯ ತವರು ಜಿಲ್ಲೆಯಿಂದಲೇ ಯಾತ್ರೆ ಆರಂಭಿಸಿದ ಬಿಜೆಪಿ ಮುಖಂಡರು ಶಕ್ತಿ ಪ್ರದರ್ಶಿಸಿದರು. ವಿವಿಧ ಬಣಗಳಲ್ಲಿ ಗುರುತಿಸಿಕೊಂಡಿದ್ದವರೂ ಮುನಿಸು ಮರೆತು ಒಂದೇ ವೇದಿಕೆ ಹಂಚಿಕೊಂಡರು.

ADVERTISEMENT

ಚಾಮುಂಡಿ ಬೆಟ್ಟದಲ್ಲಿ ಪೂಜೆ: ಇದಕ್ಕೂ‌ ಮೊದಲು ಚಾಮುಂಡಿ ಬೆಟ್ಟದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಎಲ್ಲ ಮುಖಂಡರು ಪೂಜೆ ಸಲ್ಲಿಸಿದರು.‌

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೆಹರು ವೃತ್ತದಿಂದ ಪುರಭವನದ ಆವರಣದವರೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸಂಸದ ಗೋವಿಂದ ಕಾರಜೋಳ, ಶಾಸಕರಾದ ಟಿ.ಎಸ್.ಶ್ರೀವತ್ಸ, ಅರವಿಂದ ಬೆಲ್ಲದ, ಮುಖಂಡರಾದ ಡಿ.ವಿ.ಸದಾನಂದಗೌಡ, ಪ್ರತಾಪಸಿಂಹ, ಸಿ.ಟಿ.ರವಿ, ಶ್ರೀರಾಮುಲು ಸೇರಿದಂತೆ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದರು. ಪುರಭವನದ ಮುಂದಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ನಂತರ ಮಾತನಾಡಿ, 'ಗೃಹಲಕ್ಷ್ಮಿ ಯೋಜನೆ ಹಣ ಮಹಿಳೆಯರಿಗೆ ತಲುಪುತ್ತಿಲ್ಲ. ಆದರೆ, ಡೀಸೆಲ್, ಹಾಲು ಸೇರಿದಂತೆ 48 ವಸ್ತುಗಳ ಬೆಲೆ ಏರಿಸಲಾಗಿದೆ. ಜನನ- ಮರಣ ಪ್ರಮಾಣ ಪತ್ರ ಪಡೆಯಲು ಹಣ ಹೆಚ್ಚಿಸಲಾಗಿದೆ. ಹುಟ್ಟಲು- ಸಾಯಲು ಜನರು ಯೋಚಿಸಬೇಕಿದೆ' ಎಂದು ವಾಗ್ದಾಳಿ ನಡೆಸಿದರು.

'ಪ್ರಶ್ನಿಸಿದವರ ಮೇಲೆ ಪ್ರಕರಣ ದಾಖಲಿಸುವ ಅಸಹಿಷ್ಣುತೆ ರಾಜ್ಯದಲ್ಲಿ ಹೆಚ್ಚಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಜನರ ತಲೆಯನ್ನು ಬೋಳಿಸಲಾಗುತ್ತಿದೆ. ಬಿಜೆಪಿ ಹೋರಾಟದ ಬಿಸಿ ಸರ್ಕಾರಕ್ಕೆ ತಟ್ಟಲಿದೆ' ಎಂದು ಹೇಳಿದರು.‌

'ತ್ರಿವಳಿ ತಲಾಖ್, 370ನೇ ವಿಧಿ ರದ್ದು, ವಕ್ಫ್ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ಮಾಡಿದೆ. ಬೆಲೆ ಏರಿಕೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಮಾಡಿಲ್ಲ' ಎಂದರು.

ಆರ್.ಅಶೋಕ ಮಾತನಾಡಿ, 'ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕಳ್ಳ-ಮಳ್ಳರಾಗಿದ್ದಾರೆ. ತೆರಿಗೆ ವಿಧಿಸಿ ಜನರ ರಕ್ತವನ್ನು ಹೀರುತ್ತಿದ್ದಾರೆ. ಅವರನ್ನು ಬೀದಿಗೆಳೆಯಲು ಜನಾಂದೋಲನ ನಡೆಸಲಾಗಿದೆ' ಎಂದು ಹೇಳಿದರು.

'ಸಿದ್ದರಾಮಯ್ಯ ಟೋಪಿ ಒಂದಾಕಿಲ್ಲ, ಅಷ್ಟೇ. ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲು ನೀಡಿದ್ದಾರೆ. ಶಾದಿಭಾಗ್ಯ ನೀಡುತ್ತಿದ್ದಾರೆ. ಪ್ರಿಯಾಂಕಾ ವಾದ್ರಾ ಅವರನ್ನು ಮೆಚ್ಚಿಸಲು ಬಂಡೀಪುರ ರಾತ್ರಿ ವಾಹನ‌ ಸಂಚಾರ ಮಾಡಿಕೊಡಲು ಮುಂದಾಗಿದ್ದಾರೆ' ಎಂದು ಹರಿಹಾಯ್ದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, 'ಕಾಂಗ್ರೆಸ್ ದುರಾಡಳಿತದ ವಿರುದ್ಧ ಮೈಸೂರು ವಿಶ್ವವಿದ್ಯಾಲಯ ಕೊರತೆ ಬಜೆಟ್ ಮಂಡಿಸಿದೆ. ಕೊಡಗು, ಹಾಸನ ಸೇರಿದಂತೆ ಹಲವು ವಿ.ವಿಗಳನ್ನು ಮುಚ್ಚಲಾಗುತ್ತಿದೆ. ವಿಮಾನ ನಿಲ್ದಾಣ, ರೈಲು ಜಾಲ ವಿಸ್ತರಣೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೇರಳಕ್ಕೆ ಲಾಭ ಮಾಡಿಕೊಡಲು ಬಂಡೀಪುರ ರಾತ್ರಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಮುಂದಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.‌

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, 'ಮುಡಾ ನಿವೇಶನಗಳನ್ನು ವಾಪಸ್ ಮಾಡಿ ತಪ್ಪನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಹೈಕಮಾಂಡ್ ಗೆ ಕಪ್ಪಕಾಣಿಕೆ ಕೊಡಲು ಕಾಂಗ್ರೆಸ್ ನಾಯಕರಲ್ಲಿ ಪೈಪೋಟಿ ನಡೆದಿದೆ. ಜನಾಕ್ರೋಶದ ಯಾತ್ರೆಯಿಂದಲೇ‌ ಸರ್ಕಾರದ ಆಯಸ್ಸು ಕಡಿಮೆಯಾಗಲಿದೆ' ಎಂದರು.

ಮುಖಂಡ ಬಿ.ಶ್ರೀರಾಮುಲು, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುರ್ಚಿ ಬಿಟ್ಟುಹೋಗುವ ಭಯ ಆರಂಭವಾಗಿದೆ. ಎಲ್ಲ ನಾಯಕರಿಗೂ‌ ಅಧಿಕಾರದ ಚಿಂತೆಯಷ್ಟೇ ಆಗಿದೆ. ಜನರ ಚಿಂತೆಗಳು ಅವರಿಗೆ ಕೇಳುತ್ತಿಲ್ಲ. ನೆಮ್ಮದಿಯಿಂದ ಜನರು ಜೀವನ‌ ಮಾಡಲು ಆಗುತ್ತಿಲ್ಲ. ಹಾಲು, ಮದ್ಯ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ' ಎಂದು ವಾಗ್ದಾಳಿ ನಡೆಸಿದರು.

ಶಾಸಕ ಸಿ.ಎನ್.ಅಶ್ವತ್ಥನಾರಾಯಣ, ರಾಮಮೂರ್ತಿ, ಮುಖಂಡರಾದ ಮುರುಗೇಶ ನಿರಾಣಿ, ಪಿ.ಸಿ.ಮೋಹನ್, ಬಿ.ಹರ್ಷವರ್ಧನ್, ರವಿಕುಮಾರ್, ಪಿ.ರಾಜು, ಪ್ರೀತಂಗೌಡ, ನಂದೀಶ್, ನಾರಾಯಣಗೌಡ, ನಾರಾಯಣಸ್ವಾಮಿ, ರಘು ಕೌಟಿಲ್ಯ, ಫಣೀಶ್, ಎ.ಎಸ್.ನಡಹಳ್ಳಿ, ಪಕ್ಷದ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.