
ಡಾ.ಶರಣಪ್ರಕಾಶ ಪಾಟೀಲ
ಬೆಳಗಾವಿ: 'ಹಣ ಪಡೆದು ಮುಖ್ಯಮಂತ್ರಿ ಪದವಿ ಕೊಡುವ ಸಂಸ್ಕೃತಿ ಬಿಜೆಪಿಯಲ್ಲಿದೆ ಹೊರತು; ನಮ್ಮಲ್ಲಿ ಇಲ್ಲ. ಕಾಂಗ್ರೆಸ್ ಸರ್ಕಾರವನ್ನು ಜನರೇ ಆವರಿಸಿದ್ದಾರೆ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಪ್ರತಿಕ್ರಿಯಿಸಿದರು.
'ಕಾಂಗ್ರೆಸ್ಸಿನಲ್ಲಿ ₹500 ಕೋಟಿ ಕೊಟ್ಟರೆ ಮುಖ್ಯಮಂತ್ರಿ ಮಾಡುತ್ತಾರೆ' ಎಂಬ ನವಜೋತ್ ಸಿಂಗ್ ಸಿದ್ದು ಪತ್ನಿ, ಮಾಜಿ ಸಚಿವೆ ನವಜೋತ್ ಅವರ ಹೇಳಿಕೆಗೆ ಅವರು ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದರು.
'ನವಜೋತ್ ಅವರು ಕರ್ನಾಟಕದವರೇ? ಅವರು ಹೇಳಿದ್ದಾರೆ ಎಂಬುದಕ್ಕೆ ಬಿಜೆಪಿಯವರು ಏಕೆ ಮೈ ಉರಿ ಮಾಡಿಕೊಳ್ಳಬೇಕು?' ಎಂದು ಪ್ರಶ್ನಿಸಿದರು.
'ಉತ್ತರ ಕರ್ನಾಟಕ ಸಮಸ್ಯೆಗೆ ಪರಿಹಾರ ನೀಡುವುದೇ ನಮ್ಮ ಸರ್ಕಾರದ ಮುಖ್ಯ ಉದ್ದೇಶ. ಈ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಪ್ರತಿಪಕ್ಷ ಎಂಬ ಕಾರಣಕ್ಕೆ ಆರೋಪ ಮಾಡುವುದು ಬಿಜೆಪಿಯವರ ಚಟ' ಎಂದು ಹೇಳಿದರು.
'ಈಚೆಗೆ ಉಪಾಹಾರದ ನಂತರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ನೀಡಿದ ಹೇಳಿಕೆಗಳನ್ನು ವಿರೋಧ ಪಕ್ಷದವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಅವರು ಇಡ್ಲಿ ತಿಂದರೋ ನಾಟಿಕೋಳಿ ತಿಂದರೋ ಎಂಬುದು ಬೇಕಾಗಿಲ್ಲ. ಬಿಜೆಪಿ ಸದನದಲ್ಲಿ ಪ್ರಶ್ನೆಗಳನ್ನು ಕೇಳಲಿ ನಾವು ಉತ್ತರ ಕೊಡಲು ಸಿದ್ದರಿದ್ದೇವೆ' ಎಂದರು.
ವಿಧಾನ ಪರಿಷತ್ತಿನ ಮುಖ್ಯಸಚೇತಕ ಸಲೀಂ ಅಹ್ಮದ್, 'ನರೇಂದ್ರ ಮೋದಿ ಅವರು ರಾಜ್ಯಕ್ಕೆ ಏನೇನು ಅನ್ಯಾಯ ಮಾಡಿದ್ದಾರೆ ಎಂಬುದರ ಬಗ್ಗೆ ಬಿಜೆಪಿಯವರು ಮಾತನಾಡಲಿ ಎಂದು ತಿರುಗೇಟು ಕೊಟ್ಟರು.
ಸಭಾಪತಿ ಬಸವರಾಜ ಹೊರಟ್ಟಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 'ಈ ಬಗ್ಗೆ ಸಿಎಂ, ಡಿಸಿಎಂ, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬಸವರಾಜ ಹೊರಟ್ಟಿ ಅವರ ಬದಲಾವಣೆ ಇಲ್ಲ. ಈ ಕುರಿತು ಚರ್ಚೆ ಆಗಿಲ್ಲ. ಪರಿಷತ್ತಿನಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲ ಇದೆ' ಎಂದರು.
'ಪರಿಷತ್ತಿನಲ್ಲಿ ಖಾಲಿ ಸ್ಥಾನ ಭರ್ತಿ ಮಾಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನು ಸಚಿವನಾಗಬೇಕೋ, ಬೇಡವೋ ಎಂಬುದನ್ನೂ ಹೈಕಮಾಂಡ ನಿರ್ಧರಿಸುತ್ತದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.