ಬೆಂಗಳೂರು: 2017 ರಲ್ಲಿ ಅಮೂಲ್ ತನ್ನ 43 ನೇ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅಮೂಲ್ ಹಾಲನ್ನು ಉತ್ತರ ಕರ್ನಾಟಕದ ಭಾಗವೂ ಸೇರಿ ದೇಶದ ವಿವಿಧ ಕಡೆಗಳಲ್ಲಿ ಪೂರೈಕೆ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಆಗ ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಾರಾಗಿದ್ದರು? ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಪ್ರಶ್ನಿಸಿದ್ದಾರೆ.
ಈ ಸಂಬಂಧ ಟ್ವೀಟ್ವೊಂದನ್ನು ಸಿದ್ದರಾಮಯ್ಯ ಅವರಿಗೆ ಟ್ಯಾಗ್ ಮಾಡಿದ್ದು, ಅಮೂಲ್ ತನ್ನ ಹಾಲು ಮತ್ತು ಇತರ ಉತ್ಪನ್ನಗಳನ್ನು ಆಗಲೇ ವಿಸ್ತರಣೆ ಮಾಡಲು ಆರಂಭಿಸಿತ್ತು. ಈಗ ಇಬ್ಬಗೆಯ ಧೋರಣೆ ಏಕೆ? ಎಂದಿದ್ದಾರೆ.
ಕಾಂಗ್ರೆಸ್ ಅವಧಿಯಲ್ಲಿ ದಿನಕ್ಕೆ 66.3 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ರೈತರಿಂದ ಹಾಲಿನ ಉತ್ಪಾದನೆ 82.4 ಲಕ್ಷ ಲೀಟರ್ಗೆ ಏರಿಕೆಯಾಗಿದೆ. ಹಾಗಿದ್ದರೆ ಯಾರ ಅವಧಿಯಲ್ಲಿ ಖಾಸಗಿ ಡೇರಿಗಳು ಸಮೃದ್ಧವಾಗಿ ಬೆಳೆದವು ಎಂದು ಪ್ರಶ್ನಿಸಿದ್ದಾರೆ?
ತಮಿಳುನಾಡಿನ ಆವಿನ್ ಮತ್ತು ಕರ್ನಾಟಕದ ನಂದಿನಿ ಆಯಾ ರಾಜ್ಯಗಳ ಹೆಮ್ಮೆಯ ಉತ್ಪನ್ನಗಳು. ಇವೆರಡೂ ಆಯಾ ರಾಜ್ಯಗಳ ರೈತರಿಂದ ಹಾಲನ್ನು ಸಂಗ್ರಹಿಸಿ ಗ್ರಾಹಕರಿಗೆ ತಲುಪಿಸಲಾಗುತ್ತದೆ. 2014 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡಿನಲ್ಲಿ ನಂದಿನ ಹಾಲಿನ ಪೂರೈಕೆಗೆ ಚಾಲನೆ ನೀಡಿದರು. ಈ ದ್ವಿಮುಖ ನೀತಿ ಏಕೆ? ಸಿದ್ದರಾಮಯ್ಯ ಅವರೇ ಎಂದೂ ಕುಟುಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.