ಆರ್. ಅಶೋಕ
ಬೆಂಗಳೂರು: 'ಸ್ವಾತಂತ್ರ್ಯ ದೊರಕಿತು. ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇಲ್ಲ. ಅದನ್ನು ವಿಸರ್ಜಿಸಿ ಎಂದು ಹೇಳಿದ ಮಹಾತ್ಮ ಗಾಂಧಿಯವರ ಮಾತನ್ನು ಧಿಕ್ಕರಿಸಿದ ನಕಲಿ ಗಾಂಧಿಗಳು, ಇವತ್ತು ಯಾವ ನೈತಿಕತೆಯಿಂದ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಆಚರಿಸುತ್ತಿದ್ದಾರೆ' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, 'ಈಗಿನ ನಕಲಿ ಕಾಂಗ್ರೆಸ್ ಪಕ್ಷ: ನಕಲಿ ಗಾಂಧಿ ಕುಟುಂಬದಿಂದ, ನಕಲಿ ಗಾಂಧಿ ಕುಟುಂಬಕ್ಕಾಗಿ, ನಕಲಿ ಗಾಂಧಿ ಕುಟುಂಬಕೊಸ್ಕರ' ಎಂದು ವಾಗ್ದಾಳಿ ಮಾಡಿದ್ದಾರೆ.
'ಸ್ವಾತಂತ್ರ್ಯಪೂರ್ವದ ಕಾಂಗ್ರೆಸ್ ಅಂದರೆ ಅದು ರಾಜಕೀಯ ಪಕ್ಷವಾಗಿರಲಿಲ್ಲ. ದೇಶವನ್ನು ದಾಸ್ಯದಿಂದ ಮುಕ್ತಿಗೊಳಿಸಲು ಹೋರಾಡುತ್ತಿದ್ದ ದೇಶಭಕ್ತರ ಒಕ್ಕೊರಲಿನ ವೇದಿಕೆಯಾಗಿತ್ತು. ಆದರೆ ಸ್ವಾತಂತ್ರ್ಯ ಬಂದ ನಂತರ ಮಹಾತ್ಮ ಗಾಂಧೀಜಿ ಅವರ ಮಾತನ್ನು ಧಿಕ್ಕರಿಸಿ, ಕೇವಲ ಅಧಿಕಾರಕ್ಕಾಗಿ, ಕಾಂಗ್ರೆಸ್ ಪಕ್ಷವನ್ನು ಒಂದು ಕುಟುಂಬದ ಆಸ್ತಿ ಮಾಡಿಕೊಂಡ ನಕಲಿ ಗಾಂಧಿಗಳು ಮತ್ತು ಅವರ ಅನುಯಾಯಿಗಳು ಇವತ್ತು 'ಗಾಂಧಿ ಭಾರತ' ಹೆಸರಿನಲ್ಲಿ ಐತಿಹಾಸಿಕ ಬೆಳಗಾವಿ ಅಧಿವೇಶನ ಆಚರಿಸುತ್ತಿರುವುದು ವಿಪರ್ಯಾಸ' ಎಂದು ಟೀಕಿಸಿದ್ದಾರೆ.
'ಗಾಂಧೀಜಿ ಮಾತ್ರವಲ್ಲ, ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರೂ ಸಹ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದರು. ಕಾಂಗ್ರೆಸ್ ಪಕ್ಷ ಸೇರುವುದು ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಅಂಬೇಡ್ಕರರು ದಲಿತರಿಗೆ ಸಲಹೆ ನೀಡಿದ್ದರು' ಎಂದು ಅವರು ಹೇಳಿದ್ದಾರೆ.
'ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ ಗಾಂಧಿ, ಸರ್ದಾರ್ ಪಟೇಲ್ ಅಂತಹ ಮೇರು ನಾಯಕರನ್ನು ಒಳಗೊಂಡಿದ್ದ ಸ್ವಾತಂತ್ಯ ಪೂರ್ವ ಕಾಂಗ್ರೆಸ್ಗೂ ಅಧಿಕಾರಕ್ಕಾಗಿ ನಕಲಿ ಗಾಂಧಿಗಳು ನಡೆಸುತ್ತಿರುವ ಈಗಿನ ನಕಲಿ ಕಾಂಗ್ರೆಸ್ಗೂ ಸಂಬಂಧವೇ ಇಲ್ಲ. ದೇಶದ ಜನರಿಂದ ಪದೇ ಪದೇ ತಿರಸ್ಕಾರಗೊಳ್ಳುತ್ತಿರುವ ನಕಲಿ ಗಾಂಧಿಗಳನ್ನು ಮತ್ತೊಮ್ಮೆ ರೀಲಾಂಚ್ ಮಾಡಲು ರಾಜ್ಯದ ₹20 ಕೋಟಿ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ನಕಲಿ ಗಾಂಧಿಗಳ ಗುಲಾಮಗಿರಿ ಮಾಡಲು ಕನ್ನಡಿಗರಿಗೆ ದ್ರೋಹ ಮಾಡುತ್ತಿದೆ' ಎಂದು ಅವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.