ಹೊಸದುರ್ಗ: ‘ಅಹಿಂದ ಸ್ವಾಮೀಜಿಗಳು ಎ.ಸಿ.ಕಾರಿನಲ್ಲಿ ಓಡಾಡುತ್ತಾರೆ ಎಂದು ಒಬ್ಬ ಬರಹಗಾರ ಅವಿವೇಕದ ಮಾತುಗಳನ್ನಾಡಿದ್ದಾರೆ. ಇಂತಹ ಹೇಳಿಕೆಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಸಾಹಿತಿ ಬಿ.ಎಲ್.ವೇಣು ಅವರ ಮಾತಿಗೆ ಪರೋಕ್ಷವಾಗಿ ಉತ್ತರ ನೀಡಿದರು.
ತಾಲ್ಲೂಕಿನ ಬೋಕಿಕೆರೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತ್ಯುತ್ಸವದ ನೇತೃತ್ವ ವಹಿಸಿ ಅವರು ಮಾತನಾಡಿದರು.‘ಇಂತಹ ಅವಿವೇಕಿ ಬರಹಗಾರನಿಗೆ ಹೇಳುವುದೇನೆಂದರೆ, ಅಹಿಂದ ಸ್ವಾಮೀಜಿಗಳು ಶೋಕಿ ಜೀವನ ಮಾಡಲಿಕ್ಕಾಗಿ ಎ.ಸಿ. ಕಾರು ಬಳಸುತ್ತಿಲ್ಲ. ಬದಲಾಗಿ ರಾಜ್ಯದೆಲ್ಲೆಡೆ ನೆಲೆಸಿರುವ ಸಮಾಜದ ಜನರ ಸಂಘಟನೆ ಮಾಡಲು ಕೆಲವು ಸ್ವಾಮೀಜಿಗಳಿಗೆ ಭಕ್ತರು ಕಾರು ಕೊಡಿಸಿದ್ದಾರೆ. ನಾವು 25 ಲಕ್ಷ ಕಿ.ಮೀ ವ್ಯಾಪ್ತಿಯಲ್ಲಿ ಸುತ್ತಾಡಿ ಜನರನ್ನು ಸಂಘಟನೆ ಮಾಡುತ್ತಿದ್ದೇವೆ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
‘ಜನರಲ್ಲಿ ಜಾಗೃತಿ ಮೂಡಿಸಿ, ಸಮಾಜದ ಅಭಿವೃದ್ಧಿಗೆ ಸಂದೇಶ ನೀಡುತ್ತಿದ್ದೇವೆ. ಚಾಮರಾಜನಗರದಲ್ಲಿ ಉಪ್ಪಾರ ಮತ್ತು ನಾಯಕರಿಗೆ, ಚನ್ನಗಿರಿಯಲ್ಲಿ ಭೋವಿ, ಕುರುಬ ಮತ್ತು ವಾಲ್ಮೀಕಿ ಜನರ ನಡುವೆ ಜಗಳ ಆದಾಗ ಅಲ್ಲಿನ ಸಮಸ್ಯೆಯನ್ನು ಸಾಮರಸ್ಯದಿಂದ ಬಗೆಹರಿಸಿದ್ದೇವೆ. ಇಂತಹ ಸಂದರ್ಭದಲ್ಲಿ ನಿಮ್ಮ ಕೊಡುಗೆ ಏನು’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.