ಬೆಂಗಳೂರು: ಕೋವಿಡ್ –19 ಭೀತಿಯಿಂದ ನಗರದಲ್ಲಿ ಸಂಚಾರಕ್ಕೆ ಹೆದರಿರುವ ಜನ, ಬೆಂಗಳೂರು ಖಾಲಿ ಮಾಡುತ್ತಿದ್ದಾರೆ.
ಜನ ಸಂಚಾರ ಕಡಿಮೆಯಾದ ಕಾರಣ ಮಧ್ಯಾಹ್ನದ ನಂತರ ಶೇ 10ರಷ್ಟು ಬಸ್ಗಳ ಸಂಚಾರವನ್ನು ಬಿಎಂಟಿಸಿ ರದ್ದುಪಡಿಸಿದೆ.
ಪ್ರಯಾಣಿಕರಿಲ್ಲದ ಮಾರ್ಗಗಳಲ್ಲಿ ಮಾತ್ರ ಈ ಕ್ರಮ ಕೈಗೊಳ್ಳಲಾಗಿದೆ. ಸಂಜೆ ನಂತರ ಜನ ಸಂಚಾರ ಹೆಚ್ಚಾದರೆ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಸ್ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗರದಿಂದ ಹೊರ ಊರುಗಳಿಗೆ ಹೋಗಲು ಜನ ಮುಗಿ ಬಿದ್ದಿದ್ದಾರೆ. ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣಗಳಿಂದ ಹೊರಟ ಎಲ್ಲಾ ಬಸ್ಗಳು ಭರ್ತಿಯಾಗಿ ತೆರಳಿದವು. ಕರ್ನಾಟಕ ಸಾರಿಗೆ ಮಾತ್ರವಲ್ಲದೇ ಚಿಕ್ಕಮಗಳೂರು, ಮಂಗಳೂರು, ತಿರುಪತಿ, ಶಿವಮೊಗ್ಗ, ಮಡಿಕೇರಿಗೆ ಹೋದ ಐಷಾರಾಮಿ ಬಸ್ಗಳು ಭರ್ತಿಯಾಗಿಯೇ ತೆರಳಿವೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.
ಹೊರ ಜಿಲ್ಲೆಗಳಿಗೆ ಹೋಗಲು ನಗರದ ಎಲ್ಲಾ ನಿಲ್ದಾಣಗಳಲ್ಲಿ ಬಸ್ ಹತ್ತಲು ಜನ ಮುಗಿಬಿದ್ದಿದ್ದಾರೆ. ಟಿಕೆಟ್ ಕಾಯ್ದಿರಿಸುವ ಕೌಂಟರ್ಗಳ ಮುಂದೆಯೂ ಸಾಲುಗಟ್ಟಿ ನಿಂತಿದ್ದಾರೆ. ಆದರೆ, ಹೊರ ರಾಜ್ಯಗಳಿಗೆ ತೆರಳುವ ಐಷಾರಾಮಿ ಬಸ್ಗಳಿಗೆ ಆಸನ ಕಾಯ್ದಿರಿಸಿರುವ ಪ್ರಯಾಣಿಕರ ಸಂಖ್ಯೆ ಶೇ 20ರಷ್ಟು ಕಡಿಮೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.