ADVERTISEMENT

ಗ್ರಾಮೀಣ ಪ್ರದೇಶದ ಅಕ್ರಮ ಸಕ್ರಮಕ್ಕೆ ಮಸೂದೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 19:50 IST
Last Updated 20 ಸೆಪ್ಟೆಂಬರ್ 2022, 19:50 IST

ಬೆಂಗಳೂರು: ಸ್ಥಳೀಯ ಯೋಜನಾ ಪ್ರಾಧಿಕಾರಗಳ ಅಧಿಕಾರ ವ್ಯಾಪ್ತಿಗೆ ಒಳಪಡದ ಪ್ರದೇಶಗಳಲ್ಲಿ ಕಟ್ಟಡಗಳ ನಕ್ಷೆ ಮಂಜೂರಾತಿ ಪಡೆಯಲು ಇರುವ ತಾಂತ್ರಿಕ ತೊಂದರೆಗಳನ್ನು ತೆಗೆದುಹಾಕುವ ‘ಕರ್ನಾಟಕ
ಮುನಿಸಿಪಾಲಿಟಿಗಳ (ತಿದ್ದುಪಡಿ) ಮಸೂದೆ 2022’ಕ್ಕೆ ವಿಧಾನಸಭೆ ಮಂಗಳವಾರ ಅಂಗೀಕಾರ ನೀಡಿತು.

ಪ್ರತ್ಯೇಕ ನಗರ ಯೋಜನಾ ಪ್ರಾಧಿ ಕಾರಗಳ ವ್ಯಾಪ್ತಿಯಲ್ಲಿಲ್ಲದ ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮೀಣ
ಪ್ರದೇಶಗಳಲ್ಲಿ ಬಿಡಿ ನಿವೇಶನ ಹಾಗೂ ಒಂದು ಎಕರೆವರೆಗಿನ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ, ನಕ್ಷೆ ಅನುಮೋದನೆ, 11ಇ ನಕ್ಷೆ ಹಾಗೂ ಇ–ಸ್ವತ್ತುಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕವೇ ನೀಡುವ ವ್ಯವಸ್ಥೆ ಜಾರಿ ಬರಲಿದೆ. ಇದಕ್ಕಾಗಿ ಹಿಂದೆ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು.

ಈ ಮಸೂದೆಗೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಕೆಲವು ಶಾಸಕರು ಆಕ್ಷೇಪ ವ್ಯಕ್ತಪಡಿಸಿ, ‘ಇದು ರಿಯಲ್‌ ಎಸ್ಟೇಟ್‌ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡುವ ಮಸೂದೆಯಾಗಿದೆ. ಅಕ್ರಮ ಮಾಡಿದ ವರಿಗೆ ಸಕ್ರಮ ಮಾಡಿಕೊಡಲು ಸಹಾಯ ಆಗಬೇಕು ಎಂಬ ಕಾರಣಕ್ಕೆ ಮಸೂದೆ ತರಲಾಗಿದೆ. ಆದ್ದರಿಂದ ಮರುಪರಿ
ಶೀಲಿಸಬೇಕು’ ಎಂದು ಹೇಳಿದರು.

ADVERTISEMENT

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈಗಾಗಲೇ ನಿವೇಶನ ಹೊಂದಿರುವವರು ಮನೆ ಕಟ್ಟಿಕೊಳ್ಳಲು, ನಕ್ಷೆ ಅನುಮೋದನೆ, 11ಇ ನಕ್ಷೆ ಹಾಗೂ ಇ– ಸ್ವತ್ತುಗಳನ್ನು ಹೊಂದಲು ಮಸೂದೆಯಿಂದ ಅನುಕೂಲವಾಗುತ್ತದೆ. ಇದಕ್ಕೆ ಕಟ್‌ಆಫ್‌ ದಿನಾಂಕವೂ ಇದೆ. ಆ ಬಳಿಕ ನಿರ್ಮಾಣವಾದ ಮನೆ ಅಥವಾ ಬಡಾವಣೆಗಳಿಗೆ ಇದು ಅನ್ವಯ ವಾಗುವುದಿಲ್ಲ’ ಎಂದು ಹೇಳಿದರು.

‘ನಗರ ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಗೆ ಒಳ‍ಪಟ್ಟರೆ ಆ ಪ್ರದೇಶದಲ್ಲಿ ನಿಯಮ ಕಠಿಣವಾಗುತ್ತದೆ. ಬಡವರಿಗೆ ನಿವೇಶನ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಜಾಯಿಷಿ ನೀಡಿದರು.

‘ಇದು ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಬರುವುದಿಲ್ಲ. ಈವರೆಗೆ ಇದೊಂದು ದೊಡ್ಡ ಕಗ್ಗಂಟಾಗಿತ್ತು. ಸಿಕ್ಕುಗಳನ್ನು ಬಿಡಿಸುವ ಕೆಲಸ ಮಾಡು ತ್ತಿದ್ದೇವೆ. ರಿಯಲ್ ಎಸ್ಟೇಟ್‌ ವ್ಯಕ್ತಿಗಳಿಗೆ ಇದರಿಂದ ಅನುಕೂಲ ಆಗುವುದಿಲ್ಲ’ ಎಂದು ಅವರು ಹೇಳಿದರು.

ಜೆಡಿಎಸ್‌ನ ಎ.ಟಿ.ರಾಮಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್‌, ಅಮರೇಗೌಡ ಬಯ್ಯಾಪುರ ಅವರು, ಮಸೂದೆಯಿಂದ ಭೂಗಳ್ಳರು ಮತ್ತು ರಿಯಲ್‌ ಎಸ್ಟೇಟ್‌ ವ್ಯಕ್ತಿಗಳಿಗೆ ಅನುಕೂಲ ಆಗಬಹುದು’ ಎಂದು ಆಕ್ಷೇಪಿಸಿದರು. ಅದೇ ಪಕ್ಷದ ಇತರ ಸದಸ್ಯರು ಮಸೂದೆಯನ್ನು ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.