ADVERTISEMENT

ಬೆಂಗಳೂರು: ಪುಸ್ತಕ ಸಂತೆಯ ಕಳೆ ಹೆಚ್ಚಿಸಿದ ಕೊಳ್ಳುಗರು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 3:59 IST
Last Updated 16 ನವೆಂಬರ್ 2025, 3:59 IST
‘ವೀರಲೋಕ ಪುಸ್ತಕ ಸಂತೆ’ಯ ಎರಡನೆ ದಿನ ಪುಸ್ತಕ ಖರೀದಿಸಲು ಹರಿದುಬಂದ ಜನಸಾಗರ –ಪ್ರಜಾವಾಣಿ ಚಿತ್ರ
‘ವೀರಲೋಕ ಪುಸ್ತಕ ಸಂತೆ’ಯ ಎರಡನೆ ದಿನ ಪುಸ್ತಕ ಖರೀದಿಸಲು ಹರಿದುಬಂದ ಜನಸಾಗರ –ಪ್ರಜಾವಾಣಿ ಚಿತ್ರ   

ಬೆಂಗಳೂರು: ವೀರಲೋಕ ಪ್ರಕಾಶನವು ನಗರದ ಶಾಲಿನಿ ಮೈದಾನದಲ್ಲಿ ಆಯೋಜಿಸಿರುವ ‘ಪುಸ್ತಕ ಸಂತೆ’ಯು, ಎರಡನೇ ದಿನವೂ ಓದುಗರು ಮತ್ತು ಸಾಹಿತ್ಯಾಸಕ್ತರಿಂದ ಕಿಕ್ಕಿರಿದು ತುಂಬಿತ್ತು. ‘ರೀಲ್ಸ್‌’ ಸಹ ಪುಸ್ತಕ ಸಂತೆಗೆ ಲಗ್ಗೆ ಇಟ್ಟಿತ್ತು.

ಮೂರನೇ ಆವೃತ್ತಿಯ ಪುಸ್ತಕ ಸಂತೆಗೆ ಶನಿವಾರ ಶಾಲಾ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಮಕ್ಕಳನ್ನೇ ಕೇಂದ್ರವಾಗಿರಿಸಿಕೊಂಡ ಮಳಿಗೆಗಳಲ್ಲಿ ಇದ್ದ ಕಾರ್ಟೂನ್‌ ಕಥಾ ಪುಸ್ತಕಗಳು, ಸಾಂಪ್ರದಾಯಿಕ ಹಾಗೂ ಡಿಜಿಟಲ್ ಆಟಿಕೆಗಳಿಗೆ ಮಕ್ಕಳು ಮುಗಿಬಿದ್ದಿದ್ದರು.

ಕನ್ನಡದ ಪುಸ್ತಕಗಳಿಗೆ ಶೇ10–20ರಷ್ಟು ರಿಯಾಯಿತಿ ಇದ್ದ ಮಳಿಗೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳೇ ತುಂಬಿದ್ದರು. ಕಡಿಮೆ ಬೆಲೆಗೆ ಪುಸ್ತಕಗಳು ಮಾರಾಟಕ್ಕೆ ಇದ್ದುದ್ದರಿಂದ ಒಬ್ಬೊಬ್ಬ ವಿದ್ಯಾರ್ಥಿಯೂ ನಾಲ್ಕೈದು ಪುಸ್ತಕಗಳನ್ನು ಖರೀದಿಸಿ, ತಮ್ಮ ಬ್ಯಾಗುಗಳಿಗೆ ಇಳಿಸಿದರು. ಹಲವರು 10–15 ಪುಸ್ತಕಗಳನ್ನು ಕೊಂಡು, ತಮ್ಮ ಗೆಳೆಯರಿಗೆ ತೋರಿಸುತ್ತಿದ್ದರು. 

ADVERTISEMENT

ಕೆಲ ವಿದ್ಯಾರ್ಥಿ ಗೆಳೆಯರು, ‘ಎಲ್ಲರೂ ಒಂದೇ ಪುಸ್ತಕ ತೆಗೆದುಕೊಳ್ಳುವುದು ಬೇಡ. ನೀನು ಬೇರೆ ಪುಸ್ತಕ ತೆಗೆದುಕೋ, ನಾನು ಇನ್ನೊಂದು ತೆಗೆದುಕೊಳ್ಳುತ್ತೇನೆ’ ಎಂದು ಮಾತನಾಡಿಕೊಳ್ಳುತ್ತಿದ್ದರು.

ಇನ್ನು ಕೆಂಪು–ಹಳದಿ ಶಾಲು ತೊಟ್ಟ ಕನ್ನಡಿಗರು, ಹಲವು ಮಳಿಗೆಗಳಿಗೆ ಮುಗಿಬಿದ್ದಿದ್ದರು. ಕನ್ನಡ ರತ್ನಕೋಶ, ಕರ್ನಾಟಕ ಪರಂಪರೆ ಹಾಗೂ ಕುವೆಂಪು ಅವರ ರಾಮಾಯಣ ದರ್ಶನಂ ಪುಸ್ತಕಗಳನ್ನು ಖರೀದಿಸಿ ಮನೆಗೊಯ್ದರು.

ಸಂತೆಯ ಭಾಗವಾಗಿ ನಡೆಯುತ್ತಿದ್ದ ಸಂವಾದದಲ್ಲಿ ಹನೂರು ಕೃಷ್ಣಮೂರ್ತಿ–ಎಚ್‌.ಎಲ್‌.ಪುಷ್ಪಾ, ನಾ.ದಾಮೋದರ ಶೆಟ್ಟಿ–ಅಣಕು ರಾಮನಾಥ್‌, ಜಯಶ್ರೀ ಕಾಸರವಳ್ಳಿ–ಸರಳ ತಮ್ಮ ವಾದ ಮತ್ತು ಪ್ರತಿವಾದಗಳನ್ನು ಕನ್ನಡಾಸಕ್ತರ ಮುಂದಿಟ್ಟರು. ಓದುಗ–ಲೇಖಕ (ಓಲೇ) ವೇದಿಕೆಯಲ್ಲಿ ಓದುಗರು ತಮ್ಮ ನೆಚ್ಚಿನ ಲೇಖಕರೊಂದಿಗೆ ಮಾತನಾಡಿ, ಹಸ್ತಾಕ್ಷರ ಪಡೆದುಕೊಂಡರು. 

ಸಂಜೆಯ ವೇಳೆಗೆ ಎಸ್‌.ದಿವಾಕರ್ ಅವರ ‘ಎರಡು ರಟ್ಟುಗಳ ನಡುವೆ’, ಎಂ.ಎಸ್‌.ಶ್ರೀರಾಮ್‌ ಅವರ ‘ನದಿಯ ಮೂರನೆಯ ದಂಡೆ’, ಪುಂಡಲೀಕ ಕಲ್ಲಿಗನೂರು ಅವರ ‘ಶಿಲ್ಪಕಲೆಯಲ್ಲಿ ರಾಮಾಯಣ’, ದೀಪಾ ಹಿರೇಗುತ್ತಿ ಅವರ ‘ಸೋಲು ಗೆಲುವಿನ ಗೆಳೆಯ’, ಜಯಪ್ರಕಾಶ ನಾರಾಯಣ ಅವರ ‘ಜೀವ ಜೀವದ ನಂಟು’  ಕೃತಿಗಳನ್ನು ಜನಾರ್ಪಣೆ ಮಾಡಲಾಯಿತು.

ಈ ಎಲ್ಲಕ್ಕೂ ಈ ತಲೆಮಾರಿನ ಸಂವಹನ ಸಾಧನ ‘ರೀಲ್ಸ್‌’ ಸಾಕ್ಷಿಯಾಯಿತು. ಪುಸ್ತಕ ಕೊಂಡವರು, ಸಂತೆ ನೋಡಲು ಬಂದವರು, ಸಂವಾದಕ್ಕೆ ಕಿವಿಯಾಗಲು ಬಂದವರಲ್ಲಿ ಬಹುತೇಕರು ರೀಲ್ಸ್‌ ಮಾಡುತ್ತಿದ್ದರು. ತಾವು ಇಂತಿಪ್ಪ ಪುಸ್ತಕ ಕೊಂಡೆವು, ಇಂತಹ ಸಂವಾದದಲ್ಲಿ ಇದ್ದೇವೆ, ಸಂತೆಯಲ್ಲಿರುವ ತಿಂಡಿ ಸವಿಯುತ್ತಿದ್ದೇವೆ, ತಮ್ಮ ನೆಚ್ಚಿನ ಲೇಖಕರನ್ನು ನೋಡುತ್ತಿದ್ದೇವೆ... ಎಂದು ತರಾವರಿ ರೀಲ್ಸ್‌ ಮಾಡುತ್ತಿದ್ದವರು ಕಾಲು–ಕಾಲಿಗೂ ಸಿಗುತ್ತಿದ್ದರು. 

‘ಅಮ್ಮನಿಗೂ ಒಂದು ನನಗೂ ಒಂದು...’ ಪುಸ್ತಕ ಸಂತೆಯಲ್ಲಿ ಪುಸ್ತಕ ಕುತೂಹಲಿ ಕುಟುಂಬ –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.