ಹುಬ್ಬಳ್ಳಿ: ‘ಗಾಂಧೀಜಿ ಒಬ್ಬರ ಕಾರಣದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಎಂದು ಬಿಂಬಿಸಲಾಗುತ್ತಿದೆ. ಇದು ಇತರ ಹೋರಾಟಗಾರರಿಗೆ ಮಾಡುವ ಅವಮಾನ. ಇತರ ಹೋರಾಟಗಾರರನ್ನು ಸ್ಮರಿಸಿದರೆ ಗಾಂಧೀಜಿಗೆ ಅವಮಾನಿಸಿದಂತೆ ಅಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.
ಪ್ರಜ್ಞಾ ಪ್ರವಾಹ ಕರ್ನಾಟಕ ಉತ್ತರ ಪ್ರಾಂತದ ವತಿಯಿಂದ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ. ಸಂತೋಷಕುಮಾರ ಪಿ.ಕೆ ಅನುವಾದಿಸಿರುವ ‘ಸ್ವರಾಜ್ –75’ ಪುಸ್ತಕ
ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಾವರ್ಕರ್ ಅವರಿಗೆ ಅವಮಾನಿಸಿದರೆ ರೌರವ ನರಕಕ್ಕೆ ಹೋಗಬೇಕಾಗುತ್ತದೆ. ಸಾವರ್ಕರ್ ಕ್ಷಮಾಪಣೆ ಕೇಳಿದರು, ಅವರಿಗೆ ಪಿಂಚಣಿ ಸಿಗುತ್ತಿತ್ತು ಎಂಬ ಹಸಿ ಸುಳ್ಳುಗಳನ್ನುರಾಜಕೀಯ ಕಾರಣಕ್ಕೆ ಹೇಳಲಾಗುತ್ತಿದೆ. ಇಂತಹ ಅಪಮಾನಗಳು ನಿಲ್ಲದಿದ್ದರೆ ನಾವು ನಿಲ್ಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
‘ಆರ್ಎಸ್ಎಸ್ ಮೀಸಲಾತಿ ವಿರುದ್ಧವಿಲ್ಲ’
ದಮನಿತರ ಚಿಂತನ ಸಭೆಯಲ್ಲಿ ಮಾತನಾಡಿದ ಸಂತೋಷ್ ಅವರು,‘ಬಿಜೆಪಿ ಮತ್ತು ಆರ್ಎಸ್ಎಸ್ ಮೀಸಲಾತಿ ವಿರುದ್ಧವಿಲ್ಲ, ಈ ವಿಷಯದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ.ನಾವು ಮೀಸಲಾತಿ ವಿರುದ್ಧ ಇದ್ದಿದ್ದರೆ, ಕರ್ನಾಟಕದಲ್ಲಿಎಸ್ಸಿ ಮತ್ತು ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಮುಂದಾಗುತ್ತಿರಲಿಲ್ಲ. ಕಟ್ಟಕಡೆಯ ವ್ಯಕ್ತಿಗೂ ಮೀಸಲಾತಿ ಸಿಗುವಂತೆ ಮಾಡುತ್ತೇವೆ’ ಎಂದು ಹೇಳಿದರು.
‘ಮುಂದಿನ ವಿಧಾನಸಭಾ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸಮುದಾಯವಾರು ಪ್ರಾತಿನಿಧ್ಯ ನೀಡಲಾಗುವುದು. ಸಾಮಾನ್ಯ ಕ್ಷೇತ್ರದಲ್ಲಿ ಗೆಲ್ಲುವಂತಿದ್ದರೆ ಅವಕಾಶ ಮಾಡಿಕೊಡಲಾಗುವುದು’ ಎಂದು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.