ADVERTISEMENT

ರಾಜ್ಯವ್ಯಾಪಿ ‘ಬೂತ್‌ ವಿಜಯ’ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 15:49 IST
Last Updated 2 ಜನವರಿ 2023, 15:49 IST
ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಸಂತನಗರದಲ್ಲಿ ಬಿಜೆಪಿ ‘ಬೂತ್‌ ವಿಜಯ’ ಅಭಿಯಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದರು. ಸಂಸದ ಪಿ.ಸಿ. ಮೋಹನ್ ಇದ್ದರು
ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಸಂತನಗರದಲ್ಲಿ ಬಿಜೆಪಿ ‘ಬೂತ್‌ ವಿಜಯ’ ಅಭಿಯಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದರು. ಸಂಸದ ಪಿ.ಸಿ. ಮೋಹನ್ ಇದ್ದರು   

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ‘ಮಿಷನ್‌ 150’ ಗುರಿಯನ್ನು ಸಾಧಿಸಲು ರಾಜ್ಯ ವ್ಯಾಪಿ ಬಿಜೆಪಿ ಹಮ್ಮಿಕೊಂಡಿರುವ ‘ಬೂತ್ ವಿಜಯ’ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಈ ಅಭಿಯಾನವು ಇದೇ 12 ರವರೆಗೆ ನಡೆಯಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ಬಿಜೆಪಿ ಧ್ವಜಗಳನ್ನು ಹಾರಿಸುವುದಕ್ಕೂ ಚಾಲನೆ ನೀಡಲಾಯಿತು. ಬೊಮ್ಮಾಯಿ ಅವರು ಶಿವಾಜಿನಗರ ವ್ಯಾಪ್ತಿಯ ವಸಂತನಗರದ ಕೆಲವು ಮನೆಗಳಲ್ಲಿ ಪಕ್ಷದ ಧ್ವಜವನ್ನು ಕಟ್ಟಿದರು.

ಪ್ರತಿಯೊಂದು ಬೂತ್‌ನಲ್ಲಿ ವಿರೋಧಿ ಪಕ್ಷಗಳಿಗಿಂತ ಅಧಿಕ ಮತಗಳನ್ನು ಗಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಅಣಿಗೊಳಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಗಳ 312 ಮಂಡಲಗಳು, 1,445 ಮಹಾಶಕ್ತಿ ಕೇಂದ್ರಗಳು,11,642 ಶಕ್ತಿ ಕೇಂದ್ರಗಳು ಮತ್ತು 58,186 ಬೂತ್‌ಗಳ ಕಾರ್ಯಕರ್ತರು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ADVERTISEMENT

ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಗದಗ, ಶೋಭಾ ಕರಂದ್ಲಾಜೆ ಉಡುಪಿ, ಭಗವಂತ ಖೂಬಾ ಬೀದರ್‌, ಎ.ಎನ್‌.ನಾರಾಯಣ ಸ್ವಾಮಿ ಚಿತ್ರದುರ್ಗ, ಶಾಸಕ ಜಗದೀಶ ಶೆಟ್ಟರ್‌ ಹಾವೇರಿ, ಸಂಸದ ಡಿ.ವಿ.ಸದಾನಂದಗೌಡ ಬೆಂಗಳೂರು ಉತ್ತರ, ಶಾಸಕ ಕೆ.ಎಸ್‌.ಈಶ್ವರಪ್ಪ ಶಿವಮೊಗ್ಗ, ವಿಧಾನಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಚಿಕ್ಕೋಡಿ, ಸಚಿವರಾದ ಆರ್‌.ಅಶೋಕ ಬೆಂಗಳೂರು ದಕ್ಷಿಣ, ಕೆ.ಗೋಪಾಲಯ್ಯ ಹಾಸನದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು.

ಸುಮಾರು 20 ಲಕ್ಷ ಕಾರ್ಯಕರ್ತರು ಚುನಾವಣೆಯವರೆಗೆ ಪಕ್ಷದ ಗೆಲುವಿಗಾಗಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಬೂತ್‌ ಸಮಿತಿ ಪರಿಶೀಲನೆ, ಪೇಜ್‌ ಪ್ರಮುಖ್ ನಿಯುಕ್ತಿ, ಬೂತ್ ವಾಟ್ಸ್‌ ಆ್ಯಪ್ ಗ್ರೂಪ್‌ಗಳ ರಚನೆ, ಮನ್‌ಕೀ ಬಾತ್‌ ವೀಕ್ಷಣೆಗೆ ಸುಮಾರು 60 ಸಾವಿರ ಗುಂಪುಗಳ ರಚನೆ ಮಾಡಲಾಗುವುದು ಎಂದು ಬಿಜೆಪಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.