ADVERTISEMENT

ಧರ್ಮದ ಹೆಸರಲ್ಲಿ ದ್ವೇಷ ಬಿತ್ತನೆ: ಬೃಂದಾ

ಶಹಾಪುರ: ಮಹಿಳಾ ಕೃಷಿ ಕೂಲಿಕಾರರ ರಾಜ್ಯಮಟ್ಟದ ಸಮಾವೇಶ

​ಪ್ರಜಾವಾಣಿ ವಾರ್ತೆ
Published 22 ಮೇ 2022, 18:54 IST
Last Updated 22 ಮೇ 2022, 18:54 IST
ಶಹಾಪುರದಲ್ಲಿ ಭಾನುವಾರ ನಡೆದ ಮಹಿಳಾ ಕೃಷಿಕೂಲಿಕಾರರ 4ನೇ ರಾಜ್ಯಮಟ್ಟದ ಸಮಾವೇಶದಲ್ಲಿ ಸಿಪಿಎಂ ಪಾಲಿಟ್‌ ಬ್ಯುರೊ ಸದಸ್ಯೆ ಬೃಂದಾ ಕಾರಟ್ ಮಾತನಾಡಿದರು
ಶಹಾಪುರದಲ್ಲಿ ಭಾನುವಾರ ನಡೆದ ಮಹಿಳಾ ಕೃಷಿಕೂಲಿಕಾರರ 4ನೇ ರಾಜ್ಯಮಟ್ಟದ ಸಮಾವೇಶದಲ್ಲಿ ಸಿಪಿಎಂ ಪಾಲಿಟ್‌ ಬ್ಯುರೊ ಸದಸ್ಯೆ ಬೃಂದಾ ಕಾರಟ್ ಮಾತನಾಡಿದರು   

ಶಹಾಪುರ (ಯಾದಗಿರಿ ಜಿಲ್ಲೆ): ‘ದೇಶ ಮತ್ತು ರಾಜ್ಯದಲ್ಲಿ ಬೆಲೆ ಏರಿಕೆಯಾಗುತ್ತಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಆದರೆ, ಇದನ್ನು ಬದಿಗಿರಿಸಿ, ಧರ್ಮದ ಹೆಸರಲ್ಲಿ ದ್ವೇಷ ಬಿತ್ತಲಾಗುತ್ತಿದೆ’ ಎಂದು ಸಿಪಿಎಂ ಪಾಲಿಟ್‌ ಬ್ಯುರೊ ಸದಸ್ಯೆ ಬೃಂದಾ ಕಾರಟ್ ಕಳವಳ ವ್ಯಕ್ತಪಡಿಸಿದರು.

ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಭಾನುವಾರ ಮಹಿಳಾ ಕೃಷಿಕೂಲಿಕಾರರ 4ನೇ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಧರ್ಮದ ಬಗ್ಗೆ ಮಾತನಾಡುವವರು ಜಾತಿ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿಲ್ಲ. ದಲಿತರ ಮೇಲೆ ನಿರಂತರವಾಗಿ ದಬ್ಬಾಳಿಕೆ, ಅತ್ಯಾಚಾರ ನಡೆಯುತ್ತಿದ್ದರು ಯಾರೂ ಪ್ರಶ್ನಿಸುತ್ತಿಲ್ಲ. ಎಲ್ಲದಕ್ಕಿಂತ ಧರ್ಮವೇ ಮುಖ್ಯ ಎಂಬ ಸ್ಥಿತಿ ನಿರ್ಮಿಸಲಾಗಿದೆ’ ಎಂದರು.

‘ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ನಿಲ್ಲಿಸಲು ಮುಂದಾಗಿರುವ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು. ಅನ್ನ ಕಸಿದುಕೊಳ್ಳುವ ಬದಲು ಕೂಲಿ ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

‘ಬೆವರು ಹರಿಸಿ ದುಡಿಯುವ ಮಹಿಳೆಯರು ಕುಟುಂಬ ನಿರ್ವಹಣೆ ಜೊತೆ ಕೂಲಿಗೆಲಸ ಮಾಡುತ್ತಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ತೊಂದರೆ ಅನುಭವಿಸಿದ ಕೂಲಿಕಾರ್ಮಿಕರಿಗೆ ಸೌಲಭ್ಯಗಳು ಸಿಕ್ಕಿಲ್ಲ. ಉಳ್ಳವರಿಗೆ ಮಾತ್ರ ಸಿಕ್ಕಿದೆ’ ಎಂದು ಟೀಕಿಸಿದರು.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆಕೆ.ನೀಲಾ ಮಾತನಾಡಿ, ‘ನಮಗೆ ದರ್ಗಾ, ಮಂದಿರ ಎರಡೂ ಒಂದೇ. ಹಿಂದೂ, ಮುಸ್ಲಿಮರ ನಡುವೆ ದ್ವೇಷ ಬಿತ್ತಬೇಡಿ. ಮಹಿಳೆಯರು ತಮ್ಮ ಶಕ್ತಿಯನ್ನು ಅರಿತು, ಮುಂದೆ ಸಾಗಬೇಕು’ ಎಂದು ಹೇಳಿದರು.

ಇದಕ್ಕೂ ಮುನ್ನ ನಗರದ ಬಸವೇಶ್ವರ ಕಮಾನ್‌ನಿಂದ ಸಿಪಿಎಸ್ ಶಾಲಾ ಮೈದಾನದವರೆಗೆ ಮೆರವಣಿಗೆ ನಡೆಯಿತು.

ಜ್ಞಾನವಾಪಿ ಮಸೀದಿ: ಸುಪ್ರೀಂ ಕೋರ್ಟ್‌ ನಿಲುವಿನಿಂದ ನಿರಾಸೆ
ಕಲಬುರಗಿ:
‘ವಾರಾಣಸಿಯ ಜ್ಞಾನವಾಪಿ ಮಸೀದಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತಳೆದ ನಿಲುವು ನಿರಾಸೆ ಮೂಡಿಸಿದೆ’ ಎಂದು ಸಿಪಿಎಂ ಪಾಲಿಟ್‌ಬ್ಯುರೊ ಸದಸ್ಯೆ ಬೃಂದಾ ಕಾರಟ್‌ ತಿಳಿಸಿದರು.

‘ದೇಶದಲ್ಲಿ ಎಲ್ಲರೂ ಶಾಂತಿ, ಸೌಹಾರ್ದದಿಂದ ಬಾಳಬೇಕು. ಇತಿಹಾಸದಲ್ಲಿನ ಪ್ರಮಾದಗಳನ್ನು ಈಗ ತಿದ್ದಲು ಆಗದು ಎಂದು ಈ ಹಿಂದೆ ಸುಪ್ರಿಂಕೋರ್ಟ್‌ ಹೇಳಿದೆ. ಆದರೆ, ಜ್ಞಾನವಾಪಿ ಮಸೀದಿ ವಿಚಾರದಲ್ಲಿ ಇದು ಪಾಲನೆಯಾಗಿಲ್ಲ’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಎಲ್ಲ ಪೂಜಾ ಸ್ಥಳ, ಪ್ರಾರ್ಥನಾ ಸ್ಥಳ, ಧಾರ್ಮಿಕ ಸ್ಥಳಗಳನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಬೇಕು ಎಂದು ‘ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆ) ಕಾಯ್ದೆ 1991’ ಹೇಳುತ್ತದೆ. ಇದಕ್ಕಾಗಿ1947ರ ಆಗಸ್ಟ್‌ 15ರ ದಿನಾಂಕ ಗುರುತು ಮಾಡಿದೆ. , ಇದಕ್ಕೂ ಮುಂಚೆ ಇದ್ದ ಯಾವುದೇ ಧಾರ್ಮಿಕ ಸ್ಥಳ ಭವಿಷ್ಯದಲ್ಲಿ ಬದಲಾಯಿಸಬಾರದು ಎಂದರ್ಥ. ಜ್ಞಾನವಾಪಿ ಮಸೀದಿ ವಿಚಾರದಲ್ಲೂ ಸುಪ್ರಿಂ ಕೋರ್ಟ್‌ ಇದೇ ಕಾನೂನು ಎತ್ತಿಹಿಡಿಯುತ್ತದೆ ಎಂಬ ನಮ್ಮ ನಿರೀಕ್ಷೆ ಹುಸಿಯಾಗಿದೆ’ ಎಂದರು.

‘ಅಯೋಧ್ಯೆ ಹೊರತುಪಡಿಸಿ ಉಳಿದೆಲ್ಲ ಧಾರ್ಮಿಕ ಸ್ಥಳಗಳಿಗೂ‘ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆ) ಕಾಯ್ದೆ 1991’ ಅನ್ವಯವಾಗುತ್ತದೆ ಎಂದು ಸುಪ್ರಿಂಕೋರ್ಟ್‌ ತೀರ್ಪು ನೀಡಿದೆ. ಆದರೆ, ಈಗ ಜ್ಞಾನವಾಪಿ ವಿಚಾರದಲ್ಲಿ ತನ್ನ ತೀರ್ಪಿನಂತೆ ದೃಢವಾಗಿ ನಿಂತಿಲ್ಲ. ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಬಗ್ಗೆ, ಪೂಜೆಗೆ ಅವಕಾಶ ನೀಡುವ ಬೆಗೆಗಿನ ಟಿಪ್ಪಣಿಗಳು ಬೇಸರ ಮೂಡಿಸಿವೆ’ ಎಂದೂ ಹೇಳಿದರು.

‘ದೇಶದಲ್ಲಿ ಧರ್ಮಗಳ ಮಧ್ಯೆ, ಸಮುದಾಯಗಳ ಮಧ್ಯೆ ದ್ವೇಷ ಮೂಡಿಸಿ ರಾಜಕೀಯ ಲಾಭ ಮಾಡಿಕೊಳ್ಳುವುದೇ ಬಿಜೆಪಿ, ಆರ್‌ಎಸ್‌ಎಸ್‌ನ ಉದ್ದೇಶ. ದೇಶದ ಜನ ಇದನ್ನು ವಿರೋಧಿಸಬೇಕು. ಒಂದಾಗಿ ಬಾಳಿ, ಒಗ್ಗಟ್ಟಿನಿಂದ ಕೂಡಿರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.