ಪ್ರಜಾವಾಣಿ ವಾರ್ತೆ
ಬೆಂಗಳೂರು: ನಗರ ಪ್ರದೇಶಗಳಲ್ಲಿ ಅಧಿಕ ಸಂಖ್ಯೆಯಲ್ಲಿ ತಲೆ ಎತ್ತುತ್ತಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಕಡಿವಾಣ ಹಾಕಲು ಸೂಕ್ತ ನಿಯಮ ರೂಪಿಸುವ ಚಿಂತನೆ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದರು.
ಬುಧವಾರ ಮಾತನಾಡಿದ ಅವರು, ಖಾಸಗಿ ವಿಶ್ವವಿದ್ಯಾಲಯಗಳು ಮನಬಂದಂತೆ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಸೀಟುಗಳನ್ನು ನೀಡುತ್ತಿವೆ. ಇದು ನಿರುದ್ಯೋಗ ಸಮಸ್ಯೆಗೆ ದಾರಿಯಾಗಿದೆ. ಇದಕ್ಕೆ ಕಡಿವಾಣ ಅಗತ್ಯ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಗೆ (ಎಐಸಿಟಿಇ) ಪತ್ರ ಬರೆದಿದ್ದೆ. ಕೆಲವು ಸಂಸ್ಥೆಗಳು ರಾಜ್ಯದ ನಿಯಂತ್ರಣದ ಅಡಿ ಬರುವ ಕಾರಣ ರಾಜ್ಯ ಸರ್ಕಾರವೇ ನಿಯಮ ರೂಪಿಸಬಹದು ಎಂದು ಸಲಹೆ ನೀಡಿದೆ. ಹಾಗಾಗಿ, ತಾಂತ್ರಿಕ ಶಿಕ್ಷಣ ನಿಯಮ ತಿದ್ದುಪಡಿ ತರಲು ಚರ್ಚೆ ನಡೆದಿದೆ ಎಂದರು.
ಕಾಲೇಜುಗಳ ಸಂಖ್ಯೆ ಹೆಚ್ಚಳದಿಂದ ಎಂಜಿನಿಯರಿಂಗ್ ಶಿಕ್ಷಣದ ಗುಣಮಟ್ಟ ಕಡಿಮೆಯಾಗುತ್ತಿದೆ. ಪ್ರಸ್ತುತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ (ವಿಟಿಯು) ವ್ಯಾಪ್ತಿಗೆ ಒಳಪಡುವ ಕಾಲೇಜಿಗಳಲ್ಲೂ ಸಾಕಷ್ಟು ಸಮಸ್ಯೆ ಇದೆ. ಸರಿಪಡಿಸಿಕೊಳ್ಳದೇ ಇದ್ದರೆ ವಿಟಿಯುವನ್ನೇ ಹೊಣೆ ಮಾಡಲಾಗುವುದು ಎಂದು ಹೇಳಿದರು.
ಡೀಮ್ಡ್ ವಿಶ್ವವಿದ್ಯಾಲಯಗಳನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನೇರವಾಗಿ ನಿಯಂತ್ರಿಸುತ್ತಿದೆ. ಹಾಗಾಗಿ, ಯುಜಿಸಿಗೂ ಪತ್ರ ಬರೆಯಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.