ಹುಬ್ಬಳ್ಳಿ: ತ್ವರಿತ ಬಸ್ ಸೇವೆಯ (ಬಿಆರ್ಟಿಎಸ್– ಚಿಗರಿ) ಪ್ರಾಯೋಗಿಕ ಸಂಚಾರ ಹುಬ್ಬಳ್ಳಿಯಲ್ಲಿ ಮಂಗಳವಾರ ಆರಂಭವಾಯಿತು.
ಹುಬ್ಬಳ್ಳಿಯ ಬಿಎಸ್ಎನ್ಎಲ್ ಕಚೇರಿ ಮುಂಭಾಗದ ನಿಲ್ದಾಣದಿಂದ ಹೊರಟ ಬಸ್ ಉಣಕಲ್ ತಲುಪುಪಿತು. ನಿಧಾನಗತಿಯ ಕಾಮಗಾರಿಯಿಂದ ರೋಸಿಹೋಗಿ, ಬಿಆರ್ಟಿಎಸ್ ಆರಂಭವಾಗುವುದೇ ಎಂಬ ಅನುಮಾನ ಹೊಂದಿದ್ದ ಮಹಾನಗರದ ಜನರಲ್ಲಿ ಹೊಸ ನಿರೀಕ್ಷೆಗಳು ಟಿಸಿಲೊಡೆದವು. ರಸ್ತೆಯ ಇಕ್ಕೆಲ ಹಾಗೂ ನಿಲ್ದಾಣಗಳ ಎರಡೂ ಬದಿ ನಿಂತಿದ್ದ ಜನರು, ಕೈಬೀಸುವ ಮೂಲಕ ಹೊಸ ಆರಂಭಕ್ಕೆ ಶುಭಾಶಯ ಕೋರಿದರು. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಹುಬ್ಬಳ್ಳಿ– ಧಾರವಾಡದ ಮಧ್ಯೆ ತ್ವರಿತ ಸಾರಿಗೆ ಸೇವೆ ನೀಡುವುದು ಈ ಯೋಜನೆ ಉದ್ದೇಶವಾಗಿದೆ. ಸದ್ಯ ಈಗ ಹುಬ್ಬಳ್ಳಿ ವ್ಯಾಪ್ತಿಯಲ್ಲಿಯೇ ಪ್ರಾಯೋಗಿಕ ಸಂಚಾರ ಆರಂಭಿಸಲಾಗಿದ್ದು, ಅದನ್ನು ಧಾರವಾಡದ ವರೆಗೆ ವಿಸ್ತರಿಸಲಾಗುವುದು. ನವೆಂಬರ್ 1ರಿಂದ ಪೂರ್ಣ ಪ್ರಮಾಣದ ಸೇವೆ ಆರಂಭಿಸಲಾಗುವುದು. ಆರು ಕಿ.ಮೀ ಪ್ರಯಾಣಕ್ಕೆ ಹತ್ತು ರೂಪಾಯಿ ನಿಗದಿಪಡಿಸಲಾಗಿದೆ ಎಂದು ಬಿಆರ್ಟಿಎಸ್ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ತಿಳಿಸಿದರು.
ಬಾಕಿ ಇರುವ ಸಣ್ಣಪುಟ್ಟ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಚಿಗರಿ ಸಾರಿಗೆ ನಿರ್ವಹಣೆಗೆ ಪ್ರತ್ಯೇಕ ನಿಗಮ ಆರಂಭಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ₹904 ಕೋಟಿಯನ್ನು ಈ ಯೋಜನೆಗೆ ಖರ್ಚು ಮಾಡಲಾಗುತ್ತಿದೆ. ಪ್ರಸ್ತುತ ಹುಬ್ಬಳ್ಳಿ– ಧಾರವಾಡದ ಪ್ರಯಾಣ ಅವಧಿ 45 ನಿಮಿಷ ಇದ್ದು, ಚಿಗರಿ ಬಸ್ಗಳು ಈ ಅವಧಿಯನ್ನ 30 ನಿಮಿಷಕ್ಕೆ ಇಳಿಸಲಿವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.