ADVERTISEMENT

ಸೋಮವಾರವೇ ವಿಶ್ವಾಸಮತ ಕೋರಬೇಕು: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 19:54 IST
Last Updated 13 ಜುಲೈ 2019, 19:54 IST
   

ಬೆಂಗಳೂರು:‘ಈ ಸರ್ಕಾರ ಶಾಸಕರ ವಿಶ್ವಾಸ ಕಳೆದುಕೊಂಡಿದೆ. ಬಹುಮತವೂ ಇಲ್ಲ. ಹೀಗಾಗಿ ಕುಮಾರಸ್ವಾಮಿ ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

‘ಸುಪ್ರೀಂಕೋರ್ಟ್‌ನಲ್ಲಿ ಆದ ವಾದ–ಪ್ರತಿವಾದಗಳು ನಿಮಗೂ ಗೊತ್ತಿರಬಹುದು. ಮುಂಬೈನಲ್ಲಿರುವ 10 ಮಂದಿ ಅತೃಪ್ತರ ಜೊತೆಗೆ ಹೊಸದಾಗಿ ಐವರು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದಾರೆ. ಇವರ ಮನವಿಗಳನ್ನು ನ್ಯಾಯಾಲಯ ಸ್ವೀಕರಿಸಿದೆ. ಈ ಹಂತದಲ್ಲಿ ಯಾರೂ ಹಿಂದೆ ಸರಿಯಲು ಆಗುವುದಿಲ್ಲ. ಬೆಳಿಗ್ಗೆಯಿಂದ ಶಿವಕುಮಾರ್ ಮತ್ತು ಇತರರ ಒತ್ತಡದಿಂದ ಎಂಟಿಬಿ ನಾಗರಾಜ್ ಏನೋ ಹೇಳಿರಬಹುದು. ಆದರೆ ಕೋರ್ಟ್‌ಗೆ ಮನವಿ ಸಲ್ಲಿಸಿರುವವರಲ್ಲಿ ಅವರೂ ಸೇರಿದ್ದಾರೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು’ ಎಂದರು.

‘ಶಾಸಕರ ವಿಶ್ವಾಸ ಕಳೆದುಕೊಂಡು ನಾನು ಅಧಿಕಾರದಲ್ಲಿ ಇರಬೇಕಾಗಿಲ್ಲ ಎಂದುಕುಮಾರಸ್ವಾಮಿ ಬಹಿರಂಗವಾಗಿ ಹೇಳಿದ್ದಾರೆ. ವಿಶ್ವಾಸಮತ ಕೋರುವ ಅವರ ಪ್ರಸ್ತಾವವನ್ನು ನಾನು ಸ್ವಾಗತಿಸುತ್ತೇನೆ. ಅವರಿಗೆ ಬಹುಮತವಿಲ್ಲ ಎಂದರೆ ರಾಜೀನಾಮೆ ಕೊಟ್ಟು ಸರ್ಕಾರ ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಡಬೇಕು’ ಎಂದು ಸಲಹೆ ಮಾಡಿದರು.

ADVERTISEMENT

‘ಈ ಸರ್ಕಾರದ ಬಗ್ಗೆ ಜನರಿಗೆ ಬೇಸರ ಬಂದಿದೆ. ರಾಜ್ಯದಲ್ಲಿ ಎಲ್ಲಿಯೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಜನರು ಈ ಸರ್ಕಾರ ಹೋಗಬೇಕು ಅಂತ ಹೇಳ್ತಿದ್ದಾರೆ.ಮುಂಬೈನಲ್ಲಿ ಎಲ್ಲ ಶಾಸಕರು ಖುಷಿಯಾಗಿದ್ದಾರೆ. ಅವರ ಜೊತೆಗೆ ಸಂಪರ್ಕದಲ್ಲಿದ್ದೇನೆ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.