ADVERTISEMENT

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ: ಯಡಿಯೂರಪ್ಪ– ಯತ್ನಾಳ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 11:19 IST
Last Updated 5 ಫೆಬ್ರುವರಿ 2021, 11:19 IST
ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ (ಸಂಗ್ರಹ ಚಿತ್ರ)
ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ (ಸಂಗ್ರಹ ಚಿತ್ರ)   

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ‘ಪ್ರವರ್ಗ 2 ಎ’ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ಸದಸ್ಯ ಬಸನಗೌಡ ಯತ್ನಾಳ ನಡುವಿನ ಜಟಾಪಟಿಗೆ ವಿಧಾನಸಭೆ ಶುಕ್ರವಾರ ಸಾಕ್ಷಿಯಾಯಿತು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಉತ್ತರ ನೀಡಿ ಕೂತರು. ಈ ವೇಳೆ ಬಸನಗೌಡ ಯತ್ನಾಳ, ‘ಪಂಚಮಸಾಲಿ ಹಾಗೂ ಹಾಲುಮತ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಮೂರು ಪಕ್ಷಗಳ ಸದಸ್ಯರು ಸದನದಲ್ಲಿ ಧರಣಿ ನಡೆಸಿದ್ದೇವೆ. ಆದರೆ, ಆ ವಿಷಯದ ಬಗ್ಗೆ ಮುಖ್ಯಮಂತ್ರಿ ಉತ್ತರ ನೀಡಿಲ್ಲ’ಎಂದು ದೂರಿದರು. ‘ಈಗ ವಿರೋಧ ಪಕ್ಷದ ನಾಯಕರು ಸರ್ಕಾರದ ಉತ್ತರದ ಬಗ್ಗೆ ಸ್ಪಷ್ಟೀಕರಣ ಕೇಳುತ್ತಿದ್ದಾರೆ. ನಿಮಗೆ ಮತ್ತೆ ಅವಕಾಶ ನೀಡುತ್ತೇನೆ’ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದದರು.

‘ಮತ್ತೆ ನೀವು ಕಲಾಪ ಮುಂದೂಡಿ ಹೋಗುತ್ತೀರಿ. ಉತ್ತರವೇ ಸಿಗುವುದಿಲ್ಲ. ಮುಖ್ಯಮಂತ್ರಿ ಅವರು ಈಗಲೇ ಹೇಳಿಕೆ ನೀಡಬೇಕು‘ ಎಂದು ಯತ್ನಾಳ ಆಗ್ರಹಿಸಿದರು.

ಆಗ ಎದ್ದುನಿಂತ ಯಡಿಯೂರಪ್ಪ, ‘ನಮ್ಮದ್ದು ಪ್ರಾದೇಶಿಕ ಪಕ್ಷವಲ್ಲ, ರಾಷ್ಟ್ರೀಯ ಪಕ್ಷ. ಇಂತಹ ವಿಚಾರವನ್ನು ನಾನು ಏಕಾಏಕಿ ತೀರ್ಮಾನ ಮಾಡಲು ಆಗುವುದಿಲ್ಲ. ಪ್ರಧಾನಿ, ಗೃಹ ಸಚಿವರು ಹಾಗೂ ಕೇಂದ್ರದ ಪ್ರಮುಖರ ಜತೆಗೆ ಚರ್ಚಿಸಿ ಮುಂದುವರಿಯಬೇಕಿದೆ‘ ಎಂದರು. ಈ ಬಗ್ಗೆ ನಿಲುವು ಸ್ಪಷ್ಟಪಡಿಸಬೇಕು ಎಂದು ಯತ್ನಾಳ ಆಗ್ರಹಿಸಿದರು.

‘ರಾಜ್ಯದಲ್ಲಿ ನಮ್ಮದೇ ಪಕ್ಷದ 25 ಸಂಸದರು ಇದ್ದಾರೆ. ಅವರ ನಿಯೋಗವನ್ನು ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪರಿಹಾರ ಕಂಡುಕೊಳ್ಳಿ’ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದರು. ‘ನಮ್ಮ ಸಮುದಾಯವನ್ನು ಅವಕಾಶವಂಚಿತರನ್ನಾಗಿ ಮಾಡುವ ಹುನ್ನಾರ ನಡೆದಿದೆಎಂದು ಯತ್ನಾಳ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.