ಬೆಂಗಳೂರು: ಅನರ್ಹ ಶಾಸಕರ ಪರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಆಡಿಯೊ ಬಗ್ಗೆ ರಾಷ್ಟ್ರಪತಿಗಳಿಗೆ ದೂರು ನೀಡಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
‘ಶಾಸಕರು ಪಕ್ಷಾಂತರ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಯಡಿಯೂರಪ್ಪ ಕಾರಣ ಎಂಬುದು ಆಡಿಯೊದಿಂದ ಸ್ಪಷ್ಟವಾಗಿದೆ. ಅವರಿಬ್ಬರೂ ಸಂವಿಧಾನಕ್ಕೆ ವಿರೋಧವಾಗಿ ವರ್ತಿಸಿದ್ದಾರೆ. ಇದನ್ನು ರಾಷ್ಟ್ರಪತಿ ಅವರಿಗೆ ಮನವರಿಕೆ ಮಾಡಲಿದ್ದೇವೆ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
‘ಸಾಂವಿಧಾನಿಕ ಹುದ್ದೆಯಲ್ಲಿರುವವರು ಈ ರೀತಿ ಮಾಡಿದರೆ ಹೇಗೆ? ಅವರು ಆಯಾರಾಂ ಗಯಾರಾಂ ಮಾಡಿಸಿದ್ದಾರೆ. ಇದು ಪಕ್ಷಾಂತರ ನಿಷೇಧ ಕಾಯ್ದೆಯ 10ನೇ ಶೆಡ್ಯೂಲ್ನ ಸ್ಪಷ್ಟ ಉಲ್ಲಂಘನೆ. ಯಡಿಯೂರಪ್ಪ ಹಾಗೂ ಅಮಿತ್ ಶಾ ಅವರು ರಾಜೀನಾಮೆ ಕೊಡಬೇಕೆಂದು ರಾಷ್ಟ್ರಪತಿ ಅವರಲ್ಲಿ ಕೇಳಿಕೊಳ್ಳಲಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.