ADVERTISEMENT

ಎನ್‌ಡಿಆರ್‌ಎಫ್‌ ನಿಯಮಾವಳಿ ಪರಿಷ್ಕರಿಸಲು ಮನವಿ- ಯಡಿಯೂರಪ್ಪ

ಪ್ರವಾಹ ಪರಿಹಾರ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 20:00 IST
Last Updated 4 ಅಕ್ಟೋಬರ್ 2019, 20:00 IST
   

ದರೂರು (ಅಥಣಿ): ‘ಎನ್‌ಡಿಆರ್‌ಎಫ್‌ ನಿಯಮಾವಳಿ ಪರಿಷ್ಕರಿಸಿ, ಬದಲಿಸಬೇಕು ಎಂದು ಪ್ರಧಾನಿ ನರೇಂದ್ರ
ಮೋದಿ ಅವರಿಗೆ ಮನವಿ ಸಲ್ಲಿಸಲಿದ್ದೇವೆ. ಈ ನಿಯಮಾವಳಿಯ ಪ್ರಕಾರ ಬೆಳೆಹಾನಿಗೆ ಪ್ರತಿ ಹೆಕ್ಟೇರ್‌ಗೆ ಗರಿಷ್ಠ ₹13,500 ಮಾತ್ರ ಪರಿಹಾರ ನೀಡಲು ಅವಕಾಶವಿದೆ. ಇದು ನಮ್ಮ ರಾಜ್ಯದ ಸಮಸ್ಯೆಯಷ್ಟೇ ಅಲ್ಲ. ಅಗತ್ಯ ಬಿದ್ದರೆ ಸಚಿವರ ನಿಯೋಗದೊಂದಿಗೆ ಹೋಗಿ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

‘ಹತ್ತು ವರ್ಷಗಳ ಹಿಂದೆ ನಿರ್ಮಿಸಿದ್ದ ಆಸರೆ ಮನೆಗಳಲ್ಲಿ ವಾಸಕ್ಕೆ ಪ್ರವಾಹ ಸಂತ್ರಸ್ತರು ಒಪ್ಪಿದರೆ, ಅವುಗಳನ್ನು ತಲಾ ₹1 ಲಕ್ಷ ವೆಚ್ಚದಲ್ಲಿ ದುರಸ್ತಿ ಮಾಡಿಸಿಕೊಡಿ. ಎನ್‌ಡಿಆರ್‌ಎಫ್ ಖಾತೆಯಲ್ಲಿನ ಹಣ ಬಳಸಿ, ನಾಳೆಯಿಂದಲೇ ದುರಸ್ತಿ ಕಾರ್ಯ ಆರಂಭಿಸಿ’ ಎಂದು ಬಾಗಲಕೋಟೆಯಲ್ಲಿ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಘೇರಾವ್‌ ಯತ್ನ: ‘ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ಸಿ.ಎಂ ಕಾರ್‌ಗೆ ಘೇರಾವ್ ಹಾಕಿ ಪ್ರತಿಭಟನೆಗೆ ಮುಂದಾದ 10 ಮಂದಿ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

ADVERTISEMENT

‘ಸಿಎಂಗೆ ಅಹವಾಲು ಸಲ್ಲಿಸಲು ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಅವಕಾಶ ನೀಡಲಾಗಿತ್ತು’ ಎಂದು ದರೂರು ಗ್ರಾಮದ ಪ್ರವಾಹ ಪೀಡಿತ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.

ಸಂಸದರಿಗೆ ಘೇರಾವ್‌

ಬಾಗಲಕೋಟೆ: ಬೆಳಗಾವಿಯಿಂದ ಜಿಲ್ಲೆಗೆ ಬರಲಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸ್ವಾಗತಿಸಲು ಹೊರಟಿದ್ದ ಸಂಸದ ಪಿ.ಸಿ.ಗದ್ಧಿಗೌಡರಗೆ ಮುಧೋಳ ಸಮೀಪದ ಸೋರಗಾಂವ ರಸ್ತೆಯಲ್ಲಿ ನೆರೆ ಸಂತ್ರಸ್ತರು ಘೇರಾವ್ ಹಾಕಿದರು. ಇಷ್ಟು ದಿನ ಎಲ್ಲಿದ್ರಿ? ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ರಿ ಎಂದು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.