ADVERTISEMENT

ಮತದಾನದ ದಿನ ‘ಕಂಟ್ರೋಲ್‌ ರೂಂ’ ರೀತಿ ಕೆಲಸ ಮಾಡಿದ ಬಿಎಸ್‌ವೈ

ಪ್ರತಿ ಕ್ಷೇತ್ರದ ಮೇಲೂ ಕಣ್ಣಿಟ್ಟು ಬಿಎಸ್‌ವೈ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 20:15 IST
Last Updated 5 ಡಿಸೆಂಬರ್ 2019, 20:15 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಮ್ಮ ಸರ್ಕಾರದ ಭವಿಷ್ಯ ನಿರ್ಧರಿಸುವ 15 ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಆರಂಭವಾದ ಕ್ಷಣದಿಂದ ಕೊನೆಯವರೆಗೆ ಪ್ರತಿಯೊಂದು ಕ್ಷೇತ್ರದ ಮೇಲೂ ಹದ್ದಿನ ಕಣ್ಣಿಟ್ಟು, ಪಕ್ಷದ ನಾಯಕರಿಗೆ ಸಲಹೆ ಸೂಚನೆಗಳನ್ನು ನೀಡಿದರು.

ಡಾಲರ್ಸ್‌ ಕಾಲೊನಿಯ ತಮ್ಮ ನಿವಾಸದಲ್ಲೇ ಇದ್ದು, ನಿಯಂತ್ರಣ ಕೊಠಡಿ ಮಾದರಿಯಲ್ಲಿ ಕಾರ್ಯ ನಿರ್ವಹಿಸಿದರು. ಮಾಧ್ಯಮಗಳಲ್ಲಿ ಬರುತ್ತಿದ್ದ ಮಾಹಿತಿಯಲ್ಲದೇ, ಆಪ್ತರಿಂದಲೂ ಮಾಹಿತಿ ತರಿಸಿಕೊಂಡು ಅದಕ್ಕೆ ತಕ್ಕಂತೆ ಮುಂದೇನು ಮಾಡಬೇಕು ಎಂಬ ಬಗ್ಗೆ ನಿರ್ದೇಶನ ನೀಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಮಧ್ಯಾಹ್ನದವರೆಗೆ ಮತದಾನದ ನೀರಸವಾಗಿದ್ದ ಕಾರಣ ಯಡಿಯೂರಪ್ಪ ಕೊಂಚ ಆತಂಕ ಮತ್ತು ನಿರಾಸೆಗೂ ಒಳಗಾದರು. ಬಳಿಕ ಎಲ್ಲ ಕ್ಷೇತ್ರಗಳಿಗೆ ನಿಯೋಜಿಸಲಾಗಿದ್ದ ಉಸ್ತುವಾರಿ ಸಚಿವರ ಜತೆ ಮಾತನಾಡಿ, ಮತದಾರರು ಕಡ್ಡಾಯವಾಗಿ ಬಂದು ಪಕ್ಷಕ್ಕೆ ಮತ ಚಲಾಯಿಸುವಂತೆ ಮನವೊಲಿಸಲು ತಾಕೀತು ಮಾಡಿದರು. ಆ ಪ್ರಕಾರ ಬೂತ್‌ ಮಟ್ಟದ ಕಾರ್ಯಕರ್ತರು ಪಕ್ಷದ ಮತದಾರರ ಮನೆಗಳಿಗೆ ತೆರಳಿ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಯಡಿಯೂರಪ್ಪ ಅವರು ಸಂಜೆ 6 ರವರೆಗೆ ಮನೆಯಲ್ಲೇ, ಕೆಲವು ತಮ್ಮ ಆಪ್ತ ಶಾಸಕರು ಮತ್ತು ಸಚಿವರ ಜತೆಗೆ ಉಳಿದರು. ಮಧ್ಯಾಹ್ನದ ಬಳಿಕ ಮತದಾನದ ಪ್ರಮಾಣ ಚುರುಕಾದ ಬಳಿಕ ಕೊಂಚ ನಿರಾಳರಾದರು ಎಂದೂ ಮೂಲಗಳು ಹೇಳಿವೆ.

ಬುಧವಾರವೂ ಮನೆಯಲ್ಲೇ ಉಳಿದು ಯಡಿಯೂರಪ್ಪ ಕಾರ್ಯತಂತ್ರ ಹೆಣೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.