ADVERTISEMENT

ಬೆಂಗಳೂರಿನ ಕಟ್ಟಡ ನಿರ್ಮಾಣ ಸಂಸ್ಥೆಗಳು ಕೆಲಸ ಆರಂಭಿಸಿ: ಸಚಿವ ಸುರೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 2 ಮೇ 2020, 14:03 IST
Last Updated 2 ಮೇ 2020, 14:03 IST
ಸಚಿವ ಸುರೇಶ್ ಕುಮಾರ್
ಸಚಿವ ಸುರೇಶ್ ಕುಮಾರ್    

ಬೆಂಗಳೂರು: ಕ್ರೆಡಾಯ್ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಕಟ್ಟಡ ನಿರ್ಮಾಣ ಸಂಸ್ಥೆಗಳು ಬೆಂಗಳೂರಿನಲ್ಲಿ ಕೊರೋನಾ ಕಾರಣ ಸ್ಥಗಿತಗೊಳಿಸಿರುವ ಸುಮಾರು 414 ಸ್ಥಳಗಳಲ್ಲಿ ತಕ್ಷಣದಿಂದಲೇ ಕಾಮಗಾರಿಗಳನ್ನು ಪ್ರಾರಂಭಿಸಬೇಕೆಂದು ಸಚಿವ ಸುರೇಶ್ ಕುಮಾರ್ ಕ್ರೆಡಾಯ್ ಪ್ರತಿನಿಧಿಗಳಿಗೆ ಸೂಚನೆ ನೀಡಿದ್ದಾರೆ.

ಅನ್ಯರಾಜ್ಯಗಳಿಗೆ ಸೇರಿದ ಸಾವಿರಾರು ಕಟ್ಟಡ ಕಾರ್ಮಿಕರು, ಹಣದ ಅಭಾವದಿಂದ ತಮ್ಮ‌ ರಾಜ್ಯಗಳಿಗೆ ತೆರಳಲು ಪ್ರಾರಂಭಿಸಿದ್ದು, ಅವರು ಬೀದಿಗೆ ಬಂದರೆ ಅವರ ಹಿತ ಕಾಯುವಲ್ಲಿ, ಅವರು ಕೋರಿದ ಸ್ಥಳಗಳಿಗೆ ತೆರಳಲು ಸರ್ಕಾರವು ಅನುಕೂಲ ಕಲ್ಪಿಸಲು ಬದ್ಧವಾಗಿದೆಯೆಂದ‌ ಸಚಿವರು, ಕೂಡಲೇ ಈ ಕಾರ್ಮಿಕರು ಬೆಂಗಳೂರಿನಲ್ಲಿ ನೆಲೆ‌ನಿಲ್ಲುವಲ್ಲಿ ಕಾಮಗಾರಿಗಳು ಆರಂಭವಾಗಬೇಕಿದೆ ಎಂದರು.

ಸುಮಾರು ಎಪ್ಪತ್ತು ಸಾವಿರ ಕಾರ್ಮಿಕರು ತಮ್ಮ ಸಂಘಟನೆಗೆ ಸೇರಿದ ಸ್ಥಳಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ತೊಡಗಿಸಿಕೊಂಡಿದ್ದು, ಈ ಎಲ್ಲ ಕಾರ್ಮಿಕರಿಗೆ ಸೋಮವಾರದಿಂದಲೇ ಕೆಲಸವನ್ನು‌ ನೀಡುವ ಕಾರ್ಯ ಪ್ರಾರಂಭಿಸಲಾಗುವುದೆಂದು ಕ್ರೆಡಾ‌ಯ್ ಅಧ್ಯಕ್ಷ ಶ್ರೀ ಕಿಶೋರ್ ಹೇಳಿದರು.

ADVERTISEMENT

ಸರ್ಕಾರದ ವತಿಯಿಂದ ಬೇಕಿರುವ ಎಲ್ಲಾಸಹಕಾರವನ್ನೂ ವಿಸ್ತರಿಸಲು ಕ್ರಮ ವಹಿಸಲಾಗುವುದೆಂಬ ಭರವಸೆಯನ್ನು ನೀಡಿದ ಸಚಿವ ಸುರೇಶ್ ಕುಮಾರ್, ಕಾರ್ಮಿಕರ ಹಿತ ಕಾಯುವಲ್ಲಿ ಸಂಸ್ಥೆ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕೆಂದು ಆಗ್ರಹಿಸಿ ಯಾವುದೇ ಸಮಸ್ಯೆಗಳು ಉದ್ಭವವಾದಲ್ಲಿ ಸರ್ಕಾರವು ಕ್ರೆಡಾಯ್ ಬೆಂಬಲಕ್ಕೆ ನಿಲ್ಲುತ್ತದೆ ಎಂದರು.

ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಸಮಾಜ ಕಲ್ಯಾಣ‌ ಇಲಾಖಾ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.