ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಬಳಿ ಇದ್ದ ಖಾತೆಗಳನ್ನು ಸಚಿವರಿಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಿದ್ದಾರೆ.
ಅನರ್ಹ ಶಾಸಕರು ಬಿಜೆಪಿಗೆ ಬಂದ ಬಳಿಕ ಆ ಖಾತೆಗಳನ್ನು ನೀಡಲೆಂದು ಮುಖ್ಯಮಂತ್ರಿಯವರ ತಮ್ಮ ಬಳಿಯೇ ಇಟ್ಟುಕೊಂಡಿದ್ದರು.
ಆದರೆ, ಈ ಎಲ್ಲ ಖಾತೆಗಳತ್ತ ಗಮನಹರಿಸಲು ಸಾಧ್ಯವಾಗದೇ ಇರುವುದು ಮತ್ತು ವಿಧಾನಮಂಡಲ 10 ದಿನಗಳವರೆಗೆ ನಡೆದರೆ ಅಲ್ಲಿ ಪ್ರಶ್ನೆಗಳಿಗೆ ಉತ್ತರ ಕೊಡುವುದು ಕಷ್ಟ ಎಂಬ ಕಾರಣಕ್ಕೆ ಹಂಚಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅನರ್ಹರು ಬಿಜೆಪಿ ಸೇರಿದ ಬಳಿಕ ಹೆಚ್ಚುವರಿ ಖಾತೆಗಳನ್ನು ಮರು ಹಂಚಿಕೆ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.
ಡಾ.ಸಿ.ಎನ್. ಅಶ್ವತ್ಥನಾರಾಯಣ– ವೈದ್ಯಕೀಯ ಶಿಕ್ಷಣ, ಲಕ್ಷಣಸವದಿ– ಕೃಷಿ, ಕೆ.ಎಸ್.ಈಶ್ವರಪ್ಪ– ಯುವಜನ ಸಬಲೀಕರಣ ಮತ್ತು ಕ್ರೀಡೆ, ಆರ್.ಅಶೋಕ್–ಪೌರಾಡಳಿತ, ಸ್ಥಳೀಯ ಸಂಸ್ಥೆಗಳು, ಜಗದೀಶ ಶೆಟ್ಟರ್– ಸಾರ್ವಜನಿಕ ಉದ್ದಿಮೆಗಳು, ಬಿ.ಶ್ರೀರಾಮುಲು– ಹಿಂದುಳಿದ ವರ್ಗಗಳ ಕಲ್ಯಾಣ, ಎಸ್.ಸುರೇಶ್ ಕುಮಾರ್– ಕಾರ್ಮಿಕ, ವಿ.ಸೋಮಣ್ಣ– ಸಕ್ಕರೆ, ಬಸವರಾಜ ಬೊಮ್ಮಾಯಿ– ಸಹಕಾರ, ಸಿ.ಸಿ.ಪಾಟೀಲ– ಅರಣ್ಯ ಮತ್ತು ಪರಿಸರ, ಎಚ್.ನಾಗೇಶ್– ಕೌಶಲ ಅಭಿವೃದ್ಧಿ, ಉದ್ಯಮಶೀಲತೆ, ಪ್ರಭು ಚವ್ಹಾಣ್– ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್, ಶಶಿಕಲಾ ಜೊಲ್ಲೆ– ಆಹಾರ ಮತ್ತು ನಾಗರಿಕ ಪೂರೈಕೆ.
ಶಂಕರಗೌಡ ಪಾಟೀಲ ಕಾರ್ಯದರ್ಶಿ: ಬೆಳಗಾವಿಯ ಶಂಕರಗೌಡ.ಐ.ಪಾಟೀಲ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಇವರು ಹಿಂದಿನಿಂದಲೂ ಯಡಿಯೂರಪ್ಪ ಅವರ ನಿಷ್ಠರೆಂದೇ ಗುರುತಿಸಿಕೊಂಡಿದ್ದಾರೆ. ಹಿಂದೆ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. ಬಿಎಸ್ವೈ ಅವರು ಕೆ.ಜೆ.ಪಿ ಸ್ಥಾಪಿಸಿದಾಗ ಅವರ ಜತೆ ಇದ್ದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಬಿ.ಜೆ.ಪುಟ್ಟಸ್ವಾಮಿ ಅವರನ್ನು ಯೋಜನಾ ಆಯೋಗದ ಉಪಾಧ್ಯಕ್ಷ ಹುದ್ದೆಗೆ ನೇಮಕ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.