ಬೆಂಗಳೂರು: ಖಾತೆಗಳ ಬಗ್ಗೆ ಅಸಮಾಧಾನಗೊಂಡ ಸಚಿವ ಸಂಖ್ಯೆ ಹೆಚ್ಚಾಗುತ್ತಿದ್ದು, ಮಂಗಳವಾರ ಸಂಜೆ ವೇಳೆಗೆ ಕೆಲವು ಸಚಿವರ ಖಾತೆಗಳು ಬದಲಾಗುವ ಸಾಧ್ಯತೆ ಇದೆ.
ಬಿ.ಸಿ.ಪಾಟೀಲ ಅವರಿಗೆ ಕೃಷಿ, ಕೆ. ಗೋಪಾಲಯ್ಯ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ, ಶಿವರಾಂ ಹೆಬ್ಬಾರ್ ಅವರಿಗೆ ಸಕ್ಕರೆ ಹಾಗೂ ಆನಂದ್ಸಿಂಗ್ ಅವರಿಗೆ ಅರಣ್ಯ ಮತ್ತು ಜೀವಿ ಶಾಸ್ತ್ರ ಖಾತೆ ನೀಡಲಾಗುವುದು ಎಂದು ಮೂಲಗಳು ಹೇಳಿವೆ.
ಗೋಪಾಲಯ್ಯ ಅವರು ಸೋಮವಾರ ರಾತ್ರಿ 11 ರ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮಗೆ ಸಣ್ಣ ಕೈಗಾರಿಕೆ ಖಾತೆ ನೀಡಿದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅದೇ ರೀತಿ ಬಿ.ಸಿ.ಪಾಟೀಲ ಅವರು ‘ಮುಖ್ಯಮಂತ್ರಿ ಹುದ್ದೆ ಕೊಟ್ಟರೂ ನಿಭಾಯಿಸುವ ಶಕ್ತಿ ಇದೆ. ಆದರೆ, ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ’ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಿದ್ದರು.
ಸಚಿವರ ಅಸಮಾಧಾನ ಹೆಚ್ಚಾಗುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಖಾತೆಗಳನ್ನು ಬದಲಾಯಿಸಲು ಮುಖ್ಯಮಂತ್ರಿ ಚಿಂತನೆ ನಡೆಸಿದ್ದಾರೆ. ರಾಜಭವನಕ್ಕೆ ಖಾತೆಗಳ ಪರಿಷ್ಕೃತ ಪಟ್ಟಿಯನ್ನು ಕಳುಹಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಒತ್ತಡ ಬಾಗಿದ ಬಿಎಸ್ವೈ: ವಲಸೆ ಬಂದವರ ಒತ್ತಡ ಮಣಿಯುವುದು ಸರಿಯಲ್ಲ. ಇದೇ ರೀತಿ ಅವರ ಒತ್ತಡಕ್ಕೆ ಮಣಿಯುತ್ತಾ ಹೋದರೆ ಅದಕ್ಕೆ ಕೊನೆ ಎಂಬುದು ಇಲ್ಲ. ಹಿಂದೆ ನಮ್ಮಲ್ಲೇ ಕೆಲವು ಸಚಿವರು ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಾಗ ಯಡಿಯೂರಪ್ಪ ಅವರು ಮಣಿದಿರಲಿಲ್ಲ ಎಂದು ಬಿಜೆಪಿಯ ಸಚಿವರೊಬ್ಬರು ತಿಳಿಸಿದರು.
***
ಬಿ.ಸಿ.ಪಾಟೀಲ: ಕೃಷಿ
ಕೆ.ಗೋಪಾಲಯ್ಯ: ಆಹಾರ ಮತ್ತು ನಾಗರಿಕ ಪೂರೈಕೆ
ಆನಂದ ಸಿಂಗ್: ಅರಣ್ಯ ಮತ್ತು ಜೀವಿಶಾಸ್ತ್ರ
ಶಿವರಾಂ ಹೆಬ್ಬಾರ್: ಸಕ್ಕರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.