ADVERTISEMENT

ಸಿದ್ದರಾಮಯ್ಯರನ್ನು ಆಧುನಿಕ ದುಶ್ಯಾಸನ ಎಂದು ಜರಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2019, 20:21 IST
Last Updated 28 ಜನವರಿ 2019, 20:21 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಕೌರವರ ಸರ್ಕಾರದ ಆಧುನಿಕ ದುಶ್ಯಾಸನ! ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ಮಹಿಳೆಯ ಮೈಕ್‌ ಕಿತ್ತೆಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಘಟಕದ ಪ್ರತಿಕ್ರಿಯೆ ಇದು.

ಈ ಬಗ್ಗೆ ‘ಬಿಜೆಪಿ ಕರ್ನಾಟಕ’ ಟ್ವಿಟರ್‌ ಖಾತೆಯಲ್ಲಿ ಪಕ್ಷದ ನಾಯಕರು ಸರಣಿ ಟ್ವೀಟ್‌ಗಳನ್ನು ಮಾಡಿ ವ್ಯಂಗ್ಯವಾಡಿದ್ದಾರೆ.

‘ಕಬ್ಬು ಬೆಳೆಗಾರರ ಬಾಕಿ ಪಾವತಿಗೆ ಒತ್ತಾಯ ಮಾಡಿದ್ದ ರೈತ ಮಹಿಳೆಯನ್ನು ‘ನಾಲ್ಕು ವರ್ಷಗಳಿಂದ ಎಲ್ಲಿ ಮಲಗಿದ್ದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ಐಪಿಎಸ್‌ ಅಧಿಕಾರಿಯನ್ನು ಬ್ಲಡಿ ರಾಸ್ಕಲ್‌ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಬೈದರು. ಇದೀಗ ಸಿದ್ದರಾಮಯ್ಯ ಅವರು ಮಹಿಳೆಯ ಮೈಕ್‌ ಕಿತ್ತುಕೊಂಡು ಬೆದರಿಕೆ ಹಾಕಿದ್ದಾರೆ.

ADVERTISEMENT

ದುಶ್ಯಾಸನ ಮರುಜನ್ಮ ಪಡೆದಿದ್ದಾನೆ. ಕರ್ನಾಟಕ ರಾಜ್ಯದಲ್ಲಿ ಅಧಿಕಾರ ಪಡೆದಿದ್ದಾನೆ. ಇದು ಜೆಡಿಎಸ್‌–ಕಾಂಗ್ರೆಸ್ ಪಕ್ಷಗಳು ಮಹಿಳೆಯರನ್ನು ನಡೆಸಿಕೊಳ್ಳುತ್ತಿರುವ ಪರಿ’ ಎಂದು ಟೀಕಿಸಿದೆ.

‘ಸಿದ್ದರಾಮಯ್ಯ ಅವರ ವರ್ತನೆಯ ಮೂಲಕ ಮತ್ತೊಂದು ಮುಖ ಬಯಲಾಗಿದೆ. ಕಾಂಗ್ರೆಸ್‌ ಶಾಸಕರಿಬ್ಬರು ರೆಸಾರ್ಟ್‌ನಲ್ಲಿ ಹೊಡೆದಾಡಿಕೊಂಡರು. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಸಾರ್ವಜನಿಕವಾಗಿ ಮಹಿಳೆ ಮೇಲೆ ದೌರ್ಜನ್ಯ ಮಾಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಟ್ವೀಟ್‌ ಮಾಡಿದ್ದಾರೆ.

'ಮಾನ್ಯ ಸಿದ್ದರಾಮಯ್ಯನವರೇ, ಸಂಜೆ ದಯವಿಟ್ಟು ಬಿಡುವು ಮಾಡಿಕೊಂಡು ‘ಉರಿ’ ಚಲನಚಿತ್ರ ನೋಡಿಕೊಂಡು ಬನ್ನಿ. ದೇಶ ರಕ್ಷಣೆ, ದೇಶ ಪ್ರೇಮದ ಬಗ್ಗೆ ಆಲೋಚನೆ ಬರುತ್ತದೆ . ಕುರ್ಚಿ ಇಲ್ಲದೆ ಮೈ ’ಉರಿ’ ಉಂಟಾಗಿ ಕಂಡವರ ಮೇಲೆ ರೋಷಾವೇಶ ಮಾಡುವುದು ಕಡಿಮೆಯಾಗುತ್ತದೆ. ಜನರು ನಿಮ್ಮನ್ನು ಪ್ರಶ್ನಿಸಲೇ ಬಾರದಾ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಪ್ರಶ್ನಿಸಿದ್ದಾರೆ.

‘ಸಮ್ಮಿಶ್ರ ಸರ್ಕಾರದಲ್ಲಿ ಎರಡು ಪಕ್ಷಗಳು ಮಹಿಳೆಯರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಉತ್ತಮ ಉದಾಹರಣೆ’ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.