ಬೆಂಗಳೂರು: ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವ ಸಂಪ್ರದಾಯವನ್ನು ರದ್ದುಪಡಿಸುವುದು ಸೂಕ್ತ ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಪ್ರತಿಪಾದಿಸಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಅನುಮೋದಿಸಿ ಸೋಮವಾರ ಮಾತನಾಡಿದ ಅವರು, ‘ರಾಜ್ಯಪಾಲರ ಬಗ್ಗೆ ಎಲ್ಲರಿಗೂ ಗೌರವ ಇದೆ. ಆದರೆ, ಅವರು ಮಾಡಿದ ಭಾಷಣವೇ ಸುಳ್ಳಿನ ಕಂತೆ ಎಂದು ಸದನದಲ್ಲಿ ಟೀಕಿಸುತ್ತೇವೆ. ವಿರೋಧ ಪಕ್ಷದಲ್ಲಿದ್ದಾಗ ಟೀಕಿಸುವ ಅನಿವಾರ್ಯ ಇದ್ದರೆ, ಭಾಷಣದಲ್ಲಿ ಏನೂ ಇಲ್ಲದಿದ್ದರೂ ಆಡಳಿತ ಪಕ್ಷದಲ್ಲಿದ್ದಾಗ ಸಮರ್ಥಿಸಿಕೊಳ್ಳುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯಪಾಲರ ಭಾಷಣದ ಪದ್ಧತಿಯನ್ನು ಮುಂದುವರಿಸುವ ಅವಶ್ಯಕತೆ ಇದೆಯೇ ಎಂಬ ಬಗ್ಗೆ ಸದನದಲ್ಲಿ ಸುದೀರ್ಘ ಚರ್ಚೆ ನಡೆಸುವ ಅಗತ್ಯ ಇದೆ’ ಎಂದರು.
‘ಹಿಂದೆ ನೀವು ವಿರೋಧ ಪಕ್ಷದಲ್ಲಿದ್ದಾಗ ರಾಜ್ಯಪಾಲರ ಭಾಷಣವನ್ನೇ ಹರಿದು ಹಾಕಿದ್ದೀರಿ. ನಾವು ಈಗ ಅಂತಹ ಕೆಲಸ ಮಾಡಿಲ್ಲ’ ಎಂದು ಜೆಡಿಎಸ್ನ ಎಚ್.ಎಂ. ರಮೇಶ್ಗೌಡ ಹೇಳಿದರು.
ಅದೇ ಕಾರಣಕ್ಕೆ ಭಾಷಣ ರದ್ದುಪಡಿಸುವುದೇ ಸೂಕ್ತ ಎಂದು ಹೇಳಿದ್ದು’ ಎಂದು ನಾರಾಯಣಸ್ವಾಮಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.