ಉಡುಪಿ: ಪ್ರಾಥಮಿಕ ಸಂಪರ್ಕಿತರ ಮಾಹಿತಿ ನೀಡದ ಹಾಗೂ ಸಂಚಾರ ಮಾಹಿತಿ ಮರೆಮಾಚಿದ ಆರೋಪದ ಮೇಲೆ ಶನಿವಾರ ಇಬ್ಬರು ಕೋವಿಡ್ ಸೋಂಕಿತರ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿಯ ಹೆಜಮಾಡಿಯ ರೋಗಿ ಸಂಖ್ಯೆ 10186, 10187 ವ್ಯಕ್ತಿಗಳು ಸಹೋದರರಾಗಿದ್ದು, ಇವರಿಗೆ ಕೋವಿಡ್ ಸೋಂಕು ತಗುಲಿರುವುದು ಈಚೆಗೆ ವರದಿಯಲ್ಲಿ ದೃಢಪಟ್ಟಿತ್ತು. ಅಧಿಕಾರಿಗಳು ಇವರಿಬ್ಬರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಸಂಪರ್ಕಿತರ ಹಾಗೂ ಸಂಚಾರ ಮಾಹಿತಿ ಕಲೆಹಾಕಲು ಯತ್ನಿಸಿದಾಗ ಸುಳ್ಳು ಮಾಹಿತಿ ನೀಡಿದ್ದಾರೆ.
ಇಬ್ಬರೂ ಬಂಟ್ವಾಳ, ಕಾಸರಗೋಡು, ಉಳ್ಳಾಲ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಂಚರಿಸಿರುವ ಮಾಹಿತಿ ಲಭ್ಯವಾಗಿದೆ. ಜತೆಗೆ, ಸೋಂಕು ಇದ್ದಾಗಲೂ ಮೊಬೈಲ್ ಸ್ವಿಚ್ ಆಫ್ ಮಾಡಿ ಓಡಾಡಿದ್ದಾರೆ. ಹಾಗಾಗಿ, ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಡಿಎಚ್ಒ ಸುಧೀರ್ ಚಂದ್ರ ಸೂಡ ಪ್ರಜಾವಾಣಿಗೆ ಮಾಹಿತಿ ನೀಡಿದರು.
ಸೋಂಕಿತರಿಬ್ಬರ ಕುಟುಂಬ ಸದಸ್ಯರಿಗೆ ಹಾಗೂ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಹಲವರಿಗೆ ಸೋಂಕು ತಗುಲಿರುವ ಮಾಹಿತಿ ಇದ್ದು, ಅಧಿಕಾರಿಗಳು ಖಚಿತಪಡಿಸಿಲ್ಲ. ಪ್ರಾಥಮಿಕ ಸಂಪರ್ಕಿತರ ಗಂಟಲ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.