ADVERTISEMENT

ಜಾತಿ ಕಾರಣ: ಮುರಿದುಬಿದ್ದ ಮದುವೆ

ಮಾಂಗಲ್ಯ ಧಾರಣೆ ಮುನ್ನ ಸಂಬಂಧ ಕೈಬಿಟ್ಟ ಪೋಷಕರು

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 19:45 IST
Last Updated 17 ಜುಲೈ 2019, 19:45 IST
   

ಸುಬ್ರಹ್ಮಣ್ಯ: ಸುಳ್ಯ ತಾಲ್ಲೂಕಿನ ಸುಬ್ರಹ್ಮಣ್ಯ ಸಮೀಪದ ಹರಿಹರ ಪಳ್ಳತ್ತಡ್ಕ ಗ್ರಾಮದಕಲ್ಯಾಣ ಮಂಟಪದಲ್ಲಿ ಇದೇ 10ರಂದು ನಿಗದಿಯಾಗಿದ್ದ ವಿವಾಹವೊಂದು ಹುಡುಗ ಮತ್ತು ಹುಡುಗಿಯ ಜಾತಿ ಬೇರೆ ಬೇರೆ ಎಂಬ ಕಾರಣದಿಂದ ಕೊನೆಯ ಕ್ಷಣದಲ್ಲಿ ಮುರಿದುಬಿದ್ದಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಒಕ್ಕಲಿಗ ಸಮುದಾಯದ ಹುಡುಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಸಮೀಪದ ಗ್ರಾಮವೊಂದರ ಮುಗೇರ ಸಮುದಾಯದ (ಪರಿಶಿಷ್ಟ ಜಾತಿ) ಹುಡುಗಿಯ ವಿವಾಹ ಜುಲೈ 10ರಂದು ನಡೆಯಬೇಕಿತ್ತು. ವರನ ಕಡೆಯವರು ಜುಲೈ 9ರಂದೇ ಕಲ್ಯಾಣ ಮಂಟಪಕ್ಕೆ ಬಂದಿದ್ದರು. ವಧುವಿನ ದಿಬ್ಬಣ ಮದುವೆ ದಿನ ಕಲ್ಯಾಣ ಮಂಟಪ ತಲುಪಿತ್ತು.

ವಧು ಮತ್ತು ವರನ ಕಡೆಯ ಸುಮಾರು 300 ಮಂದಿ ಸೇರಿದ್ದರು. ಮಾಂಗಲ್ಯ ಧಾರಣೆಗೆ ಕೆಲವೇ ಕ್ಷಣಗಳು ಬಾಕಿ ಇದ್ದವು. ಮದುವೆಗೂ ಮುಂಚಿನ ಸಂಪ್ರದಾಯಗಳು ನಡೆಯುತ್ತಿದ್ದವು. ವಧುವಿನ ಕಡೆಯವರು ಪಾಲಿಸುತ್ತಿದ್ದ ಸಂಪ್ರದಾಯವನ್ನು ಗಮನಿಸಿದ ವರನ ಸಂಬಂಧಿಗಳು ಜಾತಿಯ ಕುರಿತು ಪ್ರಶ್ನಿಸಿದ್ದಾರೆ. ವಧು ಮುಗೇರ ಜಾತಿಯವಳು ಎಂಬುದು ಗೊತ್ತಾಗುತ್ತಿದ್ದಂತೆಯೇ ತಕರಾರು ಎತ್ತಿದ್ದಾರೆ. ಎರಡೂ ಕಡೆ ಚರ್ಚೆ ನಡೆದಿದೆ. ಅಂತರ್ಜಾತಿ ವಿವಾಹಕ್ಕೆ ಎರಡೂ ಕಡೆಯವರಿಂದ ವಿರೋಧ ವ್ಯಕ್ತವಾಗಿದೆ. ಕೊನೆಯಲ್ಲಿ ಇಬ್ಬರೂ ಮದುವೆ ರದ್ದುಗೊಳಿಸಲು ಒಪ್ಪಿಗೆ ಸೂಚಿಸಿದ್ದಾರೆ.

ADVERTISEMENT

₹ 1.20 ಲಕ್ಷ ಪಾವತಿ?

ಕಲ್ಯಾಣ ಮಂಟಪ ನಿಗದಿ, ಭೋಜನದ ವ್ಯವಸ್ಥೆಗೆ ಹುಡುಗಿಯ ಕುಟುಂಬವೇ ಹಣ ವ್ಯಯಿಸಿತ್ತು. ಮದುವೆ ರದ್ದುಗೊಳಿಸುವ ತೀರ್ಮಾನದ ಬಳಿಕ ಹುಡುಗನ ಕುಟುಂಬ ಹುಡುಗಿಯ ಕಡೆಯವರಿಗೆ ₹ 1.20 ಲಕ್ಷ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.