ಬೆಂಗಳೂರು: ‘ಜಾತಿ ಜನಗಣತಿ ವರದಿ ವೈಜ್ಞಾನಿಕವಾಗಿಲ್ಲ ಮತ್ತು ಅದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದ್ದೇವೆ. ನಮ್ಮ ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇದು ಅತ್ಯಂತ ಹಳೆಯ ವರದಿ. ಅದು ವೈಜ್ಞಾನಿಕವಾಗಿ ಆಗಿಲ್ಲ. ಅವರಿಗೆ ಹೇಗೆ ಬೇಕೋ, ಹಾಗೆ ಬರೆಸಿಕೊಂಡಿದ್ದಾರೆ. ಈ ವರದಿಯನ್ನು ಸರಿಪಡಿಸಿಕೊಂಡೇ ಸರ್ಕಾರ ಮುಂದಿನ ಕ್ರಮ ತೆಗೆದುಕೊಳ್ಳಬೇಕು’ ಎಂದರು.
‘ಈ ವರದಿ ಕುರಿತಂತೆ ಲಿಂಗಾಯತ ಮತ್ತು ಒಕ್ಕಲಿಗ ನಾಯಕರು ಈಚೆಗಷ್ಟೇ ಸಭೆ ನಡೆಸಿದ್ದೇವೆ. ಮತ್ತೆ ಸಭೆ ಸೇರುತ್ತೇವೆ. ಆದರೆ, ತಕ್ಷಣದಲ್ಲೇ ಯಾವುದೇ ಸಭೆ ಅಥವಾ ಸಮಾವೇಶ ಇಲ್ಲ. ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಆಧರಿಸಿ, ನಾವು ನಮ್ಮ ನಡೆ ನಿರ್ಧರಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.