ಮಂಗಳೂರು: ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಶೇ 71ರಷ್ಟು ಪೂರ್ಣಗೊಂಡಿದೆ. ಸಮೀಕ್ಷೆಯ ಗಡುವು ಇದೇ 7 ರಂದು ಮುಗಿಯಲಿದೆ. ನಂತರವೂ ಸಮೀಕ್ಷೆ ಮುಂದುವರಿಸುವ ಬಗ್ಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಲಹೆ ಪಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, 'ದಸರಾ ರಜೆ ಬಳಿಕ ಶಾಲೆಗಳು ಇದೇ 8 ರಂದು ಪುನಾರಂಭಗೊಳ್ಳಲಿವೆ. ಬಾಕಿ ಉಳಿದ ಸಮೀಕ್ಷೆಯನ್ನು ಶನಿವಾರ ಅಥವಾ ಭಾನುವಾರ ನಡೆಸಬೇಕೋ ಅಥವಾ ಶಾಲಾ ಅವಧಿಗೆ ಮುನ್ನಅಥವ ಶಾಲಾ ಅವಧಿ ಮುಗಿದ ಬಳಿಕ ಮಾಡಬೇಕೋ ಎಂದು ಇಲಾಖೆ ಅಧಿಕಾರಿಗಳು ಶಿಕ್ಷಕರ ಸಂಘದ ಪದಾಧಿಕಾರಿಗಳ ಜೊತೆ ಚರ್ಚೆ ಮಾಡಿ ತೀರ್ಮಾನಿಸುತ್ತಾರೆ. ಶೇ 95ರಷ್ಟು ಶಿಕ್ಷಕರು ತಕರಾರು ತೆಗೆಯದೇ ಸಮೀಕ್ಷೆಗೆ ಸಹಕರಿಸಿದ್ದಾರೆ. ಆ್ಯಪ್ ನಲ್ಲಿ ನಾಲ್ಕು-ಐದು ಸಲ ಬದಲಾವಣೆ ಮಾಡಿದ್ದರಿಂದ ಸಮಸ್ಯೆ ಎದುರಾಗಿತ್ತು. ಆ ಸಮಸ್ಯೆಗಳನ್ನು ನಿವಾರಿಸಲಾಗಿದೆ. ಈಗ ಪ್ರತಿ ಕುಟುಂಬದ ಸಮೀಕ್ಷೆಗೆ ಕೇವಲ 10 ರಿಂದ 11 ನಿಮಿಷದಲ್ಲಿ ಮುಗಿಯುತ್ತಿದೆ' ಎಂದರು.
ಸರ್ಕಾರದ ಸವಲತ್ತು ತಲುಪಿಸಲು ಈ ಸಮೀಕ್ಷೆ ಮಹತ್ವದ್ದು. ಇದು ಎಲ್ಲರ ಹಕ್ಕು. ಹಾಗಾಗಿ ಜನರು ತಪ್ಪದೇ ಸಮೀಕ್ಷೆಗೆ ಸಹಕರಿಸಬೇಕು ಎಂದರು.
'ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮನ್ವಯದ ಕೊರತೆಯಿಂದ, ಮ್ಯಾಪಿಂಗ್ ಮತ್ತು ತಾಂತ್ರಿಕ ಸಮಸ್ಯೆಗಳಿಂದಾಗಿ ಸಮೀಕ್ಷೆ ನಿಧಾನಗತಿಯಲ್ಲಿ ಸಾಗಿದೆ. ದಕ್ಷಿಣ ಕನ್ನಡಲ್ಲೂ ಸುಳ್ಯ ತಾಲ್ಲೂಕಿನಲ್ಲಿ ಸಮೀಕ್ಷೆ ಬಹುತೇಕ ಪೂರ್ಣಗೊಂಡಿದೆ. ಬೆಳ್ತಂಗಡಿಯಲ್ಲಿ ಶೇ 76 ರಷ್ಟು ಪೂರ್ಣಗೊಂಡಿದೆ. ಬೆಂಗಳೂರಿನಲ್ಲಿ ಸಮೀಕ್ಷೆ ತಡವಾಗಿ ಆರಂಭವಾಗಿದೆ' ಎಂದರು.
'ಸಮೀಕ್ಷೆಗೆ ಸಹಕರಿಸಬಾರದು ಎಂದು ಕೇಂದ್ರಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ ಮೊದಲಾದ ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರವೂ ಮುಂಬರುವ ಮಾರ್ಚ್ ಸಮೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ. ಆಗಲೂ ಬಿಜೆಪಿಯವರು ಇದೇ ರೀತಿ ಅಸಹಕಾರ ನೀಡುತ್ತಾರೆಯೇ. ಆಗ ರಾಜ್ಯ ಸರ್ಕಾರದ ಸಹಕಾರವೂ ಬೇಕಾಗುವುದಿಲ್ಲವೇ' ಎಂದು ಪ್ರಶ್ನಿಸಿದರು.
'ಬಿಜೆಪಿ ಅವರು ಏನೇ ಹೇಳಿದರೂ ಜನರು ಸಮೀಕ್ಷೆಯ ಪರವಾಗಿದ್ದಾರೆ. ರಾಜ್ಯದ ಶೇ 71 ರಷ್ಟು ಜನ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಎಂದರೆ, ಅವರಿಗೆ ಇದು ಒಪ್ಪಿಗೆ ಇದೆ ಎಂದೇ ಅರ್ಥ' ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಟಿ.ಕೆ.ಸುಧೀರ್, ಶುಭೋದಯ ಆಳ್ವ, ಪದ್ಮರಾಜ ಪೂಜಾರಿ, ಸದಾಶಿವ ಉಳ್ಳಾಲ್, ನೀರಜ್ಬಪಾಲ್ ಯೋಗೇಶ್, ಪದ್ಮನಾಭ ಕೋಟ್ಯಾನ್, ಮಂಜುನಾಥ ಪೂಜಾರಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.