ಸಿದ್ದರಾಮಯ್ಯ
ಮೈಸೂರು: ‘ಇನ್ಫೊಸಿಸ್ನವರೇನು ಬೃಹಸ್ಪತಿಗಳಾ? ನಾವು ನಡೆಸುತ್ತಿರುವುದು ಹಿಂದುಳಿದವರ ಸಮೀಕ್ಷೆಯಲ್ಲ. ಅವರಿಗೆ ಅದು ಅರ್ಥವಾಗದಿದ್ದರೆ ನಾವೇನು ಮಾಡಕ್ಕಾಗುತ್ತೆ?’
– ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ’ ಎಂಬ ಇನ್ಫೊಸಿಸ್ನ ಸಹ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾ ಮೂರ್ತಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.
ಮೈಸೂರಿನಲ್ಲಿ ಎರಡು ದಿನಗಳ ಪ್ರವಾಸಕ್ಕೆಂದು ಶುಕ್ರವಾರ ಇಲ್ಲಿನ ಮಂಡಕಳ್ಳಿ ವಿಮಾನನಿಲ್ದಾಣಕ್ಕೆ ಬಂದಿಳಿದ ವೇಳೆ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
‘ಇದು ಹಿಂದುಳಿದವರ ಸಮೀಕ್ಷೆಯಲ್ಲ. ಇಡೀ ರಾಜ್ಯದ ಎಲ್ಲ ಏಳು ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಎಂದು 20 ಬಾರಿ ಹೇಳಿದ್ದೇವೆ. ಜಾಹೀರಾತನ್ನೂ ಕೊಟ್ಟಿದ್ದೇವೆ. ನಾವು ‘ಶಕ್ತಿ’, ‘ಗೃಹಲಕ್ಷ್ಮಿ’, ‘ಭಾಗ್ಯಲಕ್ಷ್ಮಿ’ ಯೋಜನೆ ಜಾರಿಗೊಳಿಸಿದ್ದೇವೆ. ಅವುಗಳ ಲಾಭವನ್ನು ಮೇಲ್ಜಾತಿಯವರು ಪಡೆದುಕೊಳ್ಳೋಲ್ಲವೇ? ನಾರಾಯಣಮೂರ್ತಿ, ಸುಧಾ ಅವರಂಥವರು ಇದು ಹಿಂದುಳಿದವರ ಸಮೀಕ್ಷೆ ಎಂಬ ಭಾವನೆ ಹೊಂದಿದ್ದರೆ ಅದು ತಪ್ಪು. ಮುಂದೆ ಕೇಂದ್ರ ಸರ್ಕಾರ ಜನಗಣತಿ ಮಾಡುತ್ತದೆ, ಆಗ ಇವರು ಏನು ಉತ್ತರ ಹೇಳುತ್ತಾರೆ’ ಎಂದು ಪ್ರಶ್ನಿಸಿದರು.
‘ಅವರಿಗೆ ತಪ್ಪು ಮಾಹಿತಿ ಇರಬಹುದು. ಏನಿದ್ದರೂ ಅವರಿಗೆ ಸೇರಿದ್ದು’ ಎಂದರು.
ಕೆಲವು ಕಂಪನಿಗಳು ಬೇರೆ ರಾಜ್ಯಗಳಿಗೆ ಹೋದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಉದ್ಯಮಿಗಳು ಎಲ್ಲಿ ಬೇಕೋ ಅಲ್ಲಿ ಹೂಡಿಕೆ ಮಾಡುತ್ತಾರೆ. ಕರ್ನಾಟಕದಲ್ಲಿ ಹೂಡಿದವರು ಸೌಕರ್ಯ ಇಲ್ಲವೆಂದು ಹಾಕಿದ್ದಾರಾ? ಐಫೋನ್ ತಯಾರಿಕಾ ಕಂಪನಿಯವರು ಕರ್ನಾಟಕದಲ್ಲಿ ಸ್ಥಾಪಿಸಿಲ್ಲವೇ? ಬೇರೆಡೆ ಮಾಡಿಲ್ಲವೇಕೆ ಎಂದು ಕೇಳಿದರೆ ಹೇಗೆ? ಅವರಿಗೆ ಇಷ್ಟವಾದಲ್ಲಿ ಬಂಡವಾಳ ಹಾಕುತ್ತಾರೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಬಹಳಷ್ಟು ಮಂದಿ ಹೂಡಿಕೆ ಮಾಡಿದ್ದಾರೆ. ಇಲ್ಲದಿದ್ದರೆ ಜಾಗತಿಕ ಹೂಡಿಕೆಯಲ್ಲಿ ಕರ್ನಾಟಕ ನಂ.1 ಹೇಗಾಗುತ್ತಿತ್ತು?. ‘ಕೆಲವರು ಹೇಳುತ್ತಾರೆ, ಮಾಧ್ಯಮದವರು ಉಪ್ಪು–ಖಾರ ಹಾಕುತ್ತೀರಷ್ಟೆ’ ಎಂದು ದೂರಿದರು.
ಬದಲಾವಣೆ ಕ್ರಾಂತಿಯಲ್ಲ:
ನವೆಂಬರ್ ಕ್ರಾಂತಿ ಕುರಿತ ಚರ್ಚೆ ಪ್ರಶ್ನೆಗೆ ಗರಂ ಆದ ಅವರು, ‘ಎಲ್ರೀ ಕ್ರಾಂತಿ ಇದೆ. ನಿಮ್ಮ ಪ್ರಕಾರ ಕ್ರಾಂತಿ ಎಂದರೇನು? ಬದಲಾವಣೆಯೇ ಕ್ರಾಂತಿಯಲ್ಲ. ರೆವಲ್ಯೂಷನ್ ಆಗುತ್ತದೆಯೇ?’ ಎಂದು ಕೇಳಿದರು.
‘ಬಿಜೆಪಿಯವರಿಗೂ ಕೆಲಸವಿಲ್ಲ. ಹೇಳುತ್ತಾರೆ. ಅದನ್ನೇ ನೀವೂ ಕೇಳುತ್ತೀರಿ. ಮಾಧ್ಯಮದವರು ಅಂತಹ ಹೇಳಿಕೆಗಳನ್ನು ನಿರ್ಲಕ್ಷಿಸಿದರೆ ಅವರೇ ಸುಮ್ಮನಾಗುತ್ತಾರೆ. ಕ್ರಾಂತಿಯೂ ಆಗುವುದಿಲ್ಲ; ಭ್ರಾಂತಿಯೂ ಆಗುವುದಿಲ್ಲ’ ಎಂದು ಪುನರುಚ್ಚರಿಸಿದರು.
‘ಯಾವುದೇ ಸಂಘ–ಸಂಸ್ಥೆಗಳು ಸರ್ಕಾರಿ ಶಾಲೆ, ಮೈದಾನ, ಉದ್ಯಾನ, ಅನುದಾನಿತ ಶಾಲೆ ಮೊದಲಾದ ಜಾಗಗಳಲ್ಲಿ ಚಟುವಟಿಕೆ ನಡೆಸುವುದಕ್ಕೆ ನಿರ್ಬಂಧ ವಿಧಿಸಲು ಕ್ರಮ ಕೈಗೊಂಡಿದ್ದೇವೆ. ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೇ, ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗಲೇ ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿತ್ತು. ಇದು ಆರ್ಎಸ್ಎಸ್ಗೆ ಸೀಮಿತವಲ್ಲ, ಎಲ್ಲ ಸಂಘ–ಸಂಸ್ಥೆಗಳಿಗೂ ಅನ್ವಯಿಸುತ್ತದೆ’ ಎಂದು ಹೇಳಿದರು.
‘ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ’ ಎಂಬ ಪುತ್ರ, ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ, ‘ಅವನನ್ನೇ ಕೇಳಿಕೊಳ್ಳಿ’ ಎಂದಷ್ಟೆ ಹೇಳಿದರು.
ಜನರು ಬದಲಾವಣೆ ಬಯಸಿದ್ದಾರೆ:
‘ಬಿಹಾರದಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ. ಹೀಗಾಗಿ, ಈ ಬಾರಿಯ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಗೆಲ್ಲುತ್ತದೆ. ರಾಹುಲ್ ಗಾಂಧಿ ಅವರು ಪಾದಯಾತ್ರೆ ಮಾಡಿದಾಗ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿತು. ಆದ್ದರಿಂದ ನಾವು ಗೆಲ್ಲುತ್ತೇವೆ ಎಂದುಕೊಂಡಿದ್ದೇನೆ’ ಎಂದರು.
‘ನನ್ನನ್ನು ಕರೆದರೆ, ಅಗತ್ಯವಿದ್ದರೆ ಪ್ರಚಾರಕ್ಕೆ ಹೋಗುತ್ತೇನೆ’ ಎಂದು ಪ್ರತಿಕ್ರಿಯಿಸಿದರು.
‘ಬಿಹಾರ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರುವುದೇ’ ಎಂಬ ಪ್ರಶ್ನೆಗೆ, ‘ಯಾವು ರಾಜ್ಯದ್ದೂ ಯಾವ ರಾಜ್ಯದ ಮೇಲೂ ಪರಿಣಾಮ ಬೀರುವುದಿಲ್ಲ’ ಎಂದರು.
‘ಯಾರಾದರೂ ಕಮಿಷನ್ ಕೇಳಿದ್ದಲ್ಲಿ, ಅದು ಸತ್ಯವಾಗಿದ್ದಲ್ಲಿ ಗುತ್ತಿಗೆದಾರರು ನ್ಯಾಯಾಲಯಕ್ಕೆ ಹೋಗಲಿ’ ಎಂದು ಹೇಳಿದರು.
ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಡಾ.ಶರಣಪ್ರಕಾಶ ಪಾಟೀಲ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಡಿ.ರವಿಶಂಕರ್, ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮಾಜಿ ಸಚಿವ ಎಂ.ಶಿವಣ್ಣ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ಖಾನ್, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ. ವಿಜಯ್ಕುಮಾರ್, ನಗರ ಜಿಲ್ಲಾ ಸಮಿತಿ ಅಧ್ಯಕ್ಷ ಆರ್.ಮೂರ್ತಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.