ಮಡಿಕೇರಿ: ಕೊಡಗಿನಲ್ಲಿ ಈಗ ತುಲಾ ಸಂಕ್ರಮಣ ಜಾತ್ರೆ ಸಂಭ್ರಮ. ಗುರುವಾರ ಸಂಜೆಯಿಂದಲೇ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಜಾತ್ರೆ ಸಂಭ್ರಮ ಮನೆ ಮಾಡಿತ್ತು.
ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸಂಪ್ರದಾಯ ಬದ್ಧವಾಗಿ ಪಿಂಡ ಪ್ರಧಾನ ಕಾರ್ಯ ನೆರವೇರಿಸಲಾಗುತ್ತಿದೆ. ಕೊಡಗು ಸೇರಿದಂತೆ ಅಪಾರ ಸಂಖ್ಯೆಯ ಯಾತ್ರಾರ್ಥಿಗಳು ಕ್ಷೇತ್ರಕ್ಕೆ ಬಂದಿದ್ದಾರೆ.
ತಲಕಾವೇರಿಯಲ್ಲಿ ಗುರುವಾರ ತಡರಾತ್ರಿ 12 ಗಂಟೆ 59 ನಿಮಿಷಕ್ಕೆ ತೀರ್ಥೋದ್ಭವ ನಿಗದಿಯಾಗಿತ್ತು. ಆದರೆ, ಸಂಜೆಯ ಬಳಿಕ ಅತ್ತ ಜನರು ಬರಲು ಆರಂಭಿಸಿದರು.ಬ್ರಹ್ಮ ಕುಂಡಿಕೆಯಲ್ಲಿ ಆವಿರ್ಭವಿಸುವ ಕಾವೇರಿಯನ್ನು ಕಣ್ತುಂಬಿಕೊಳ್ಳಲು ದೂರ ಊರುಗಳಿಂದ ಜನರು ಬಂದಿದ್ದರು.
ಭಾಗಮಂಡಲದ ಭಗಂಡೇಶ್ವರ ದೇಗುಲದಿಂದ ಮೆರವಣಿಗೆಯಲ್ಲಿ ತರಲಾಗಿದ್ದ ಚಿನ್ನಾಭರಣದಲ್ಲಿ ಕಾವೇರಿ ಮಾತೆಯ ಕಂಗೊಳಿಸುತ್ತಿದ್ದಳು. ಗುರುವಾರ ಬೆಳಿಗ್ಗೆಯೇ ವಿಶೇಷ ಪೂಜೆ ನಡೆಸಿ, ಚಿನ್ನಾಭರಣ ಧಾರಣೆ ಮಾಡಲಾಗಿತ್ತು. ತೀರ್ಥೋದ್ಭವದೊಂದಿಗೆ ಕಾವೇರಿ ಜಾತ್ರೆ ಆರಂಭಗೊಂಡಿದ್ದು, ಭಾಗಮಂಡಲದಲ್ಲಿ ಒಂದು ತಿಂಗಳು ಸಂಭ್ರಮ ಇರಲಿದೆ.
ದೀಪಾಲಂಕಾರ:ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಮಂಟಪಗಳು ವಿದ್ಯುತ್ ಬೆಳಕಿನಲ್ಲಿ ಕಂಗೊಳಿಸುತ್ತಿವೆ. ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳ ಸಂಗಮ ಸ್ಥಳವಾದ ಭಾಗಮಂಡಲದಲ್ಲಿ ಪಿಂಡ ಪ್ರಧಾನ ಶಾಸ್ತ್ರೋಕ್ತವಾಗಿ ನೆರವೇರುತ್ತಿದೆ. ಪಿಂಡ ಪ್ರಧಾನ ಮಾಡಿ ಸಂಗಮದಲ್ಲಿ ಮಿಂದು ತಲಕಾವೇರಿಯತ್ತ ಭಕ್ತರ ದಂಡೇ ಸೇರುತ್ತಿದೆ. ಪಿಂಡ ಪ್ರಧಾನ ಕಾರ್ಯದಿಂದ ಹಿರಿಯರಿಗೆ ಸದ್ಗತಿ ಮತ್ತು ಪಾಪ ಕರ್ಮಗಳು ಪರಿಹಾರವಾಗುತ್ತವೆ ಎನ್ನುವ ನಂಬಿಕೆಯಿದೆ. ಅದೇ ಕಾರಣಕ್ಕೆ ಕೊಡಗು ಸೇರಿದಂತೆ ದೂರ ಊರುಗಳಿಂದ ಯಾತ್ರಾರ್ಥಿಗಳು ಇಲ್ಲಿಗೆ ತುಲಾ ಸಂಕ್ರಮಣ ಜಾತ್ರೆ ಸಂದರ್ಭದಲ್ಲಿ ಬಂದು ವಿಧಿ ವಿಧಾನ ನೆರವೇರಿಸುತ್ತಾರೆ.
ಮಳೆ ಅಡ್ಡಿ:ಜಾತ್ರೆ ಸಂಭ್ರಮಕ್ಕೆ ಮಳೆ ಅಡ್ಡಿ ಪಡಿಸಿತು. ಗುರುವಾರ ಮಧ್ಯಾಹ್ನದ ಬಳಿಕ ಭಾಗಮಂಡಲ, ತಲಕಾವೇರಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯಿತು. ಇದರಿಂದ ಭಕ್ತರು ತೊಂದರೆಗೆ ಸಿಲುಕಿದರು. ಸಂಜೆ ಸುರಿದ ಮಳೆಯಿಂದ ರಕ್ಷಣೆ ಪಡೆಯಲೂ ಜನರು ಪರದಾಡಿದರು. ಮಳೆ ಹಾಗೂ ಚಳಿಯ ಕಾರಣಕ್ಕೆ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಿತ್ತು. ತಮಿಳುನಾಡು ಹಾಗೂ ಕೇರಳದ ಭಕ್ತರ ಸಂಖ್ಯೆಯೂ ಕಡಿಮೆಯಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.