ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸ, ಅವರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ಸೋಮವಾರ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು, ವಶಕ್ಕೆ ಪಡೆದಿರುವ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ದೆಹಲಿ, ಮುಂಬೈ ಹಾಗೂ ರಾಜ್ಯದ ವಿವಿಧೆಡೆ ವಶಪಡಿಸಿಕೊಂಡಿರುವ ದಾಖಲೆಗಳನ್ನುಕ್ರೋಡೀಕರಿಸುತ್ತಿದ್ದಾರೆ. ಬ್ಯಾಂಕ್ ಖಾತೆ, ಕಂಪ್ಯೂಟರ್ನಲ್ಲಿ ಇರುವ ಮಾಹಿತಿ ಎಲ್ಲವನ್ನೂ ಪರಿಶೀಲಿಸುತ್ತಿದ್ದಾರೆ.ಈ ಕಾರ್ಯ ಮುಗಿದ ಬಳಿಕ ಡಿ.ಕೆ. ಶಿವಕುಮಾರ್ ಮತ್ತು ಇತರರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
‘ಪ್ರಾಥಮಿಕ ತನಿಖೆ ಆಧರಿಸಿ ಮೊದಲು ಎಫ್ಐಆರ್ ದಾಖಲಿಸಿಕೊಂಡು ದಾಳಿ ನಡೆಸಲಾಗಿದೆ. ದಾಳಿ ಸಂದರ್ಭದಲ್ಲಿ ದೊರೆತ ದಾಖಲೆಗಳು, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಎಲ್ಲವನ್ನೂ ಪರಿಶೀಲನೆ ನಡೆಸಲಾಗುತ್ತದೆ. ಬಳಿಕ ವಿವರಣೆ ನೀಡಲು ಆರೋಪಿಗೆ ಅವಕಾಶ ನೀಡಲಾಗುತ್ತದೆ’ ಎಂದು ಸಿಬಿಐ ಪರ ವಕೀಲ ಪ್ರಸನ್ನಕುಮಾರ್ ಅವರು ತನಿಖಾ ಪ್ರಕ್ರಿಯೆಗಳ ಬಗ್ಗೆ ತಿಳಿಸಿದರು.
‘ಆಸ್ತಿ ಸಂಪಾದನೆಗೆ ಇರುವ ಆದಾಯದ ಮೂಲ ಯಾವುದು ಎಂಬುದರ ಬಗ್ಗೆ ವಿಚಾರಣೆ ಸಂದರ್ಭದಲ್ಲಿ ಮಾಹಿತಿ ಪಡೆಯಲಾಗುತ್ತದೆ.ದಾಳಿ ವೇಳೆ ದೊರೆತಿರುವ ದಾಖಲೆ ಮತ್ತು ವಿಚಾರಣೆ ಸಂದರ್ಭದಲ್ಲಿ ನೀಡುವ ಮಾಹಿತಿ ಆಧರಿಸಿ ಆದಾಯದ ಮೂಲ ಸರಿಯಾಗಿದ್ದರೆ ಪ್ರಕರಣವನ್ನು ಕೈಬಿಡಲಾಗುತ್ತದೆ. ಅಕ್ರಮ ಆಸ್ತಿ ಎಂಬುದು ಕಂಡು ಬಂದರೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಿಬಿಐ ಅಧಿಕಾರಿಗಳು ಸಲ್ಲಿಸುತ್ತಾರೆ’ ಎಂದು ವಿವರಿಸಿದರು.
‘ಸದ್ಯ ದಾಖಲೆಗಳ ಪರಿಶೀಲನೆ ಹಂತದಲ್ಲಿದೆ. ಅದು ಮುಗಿದ ಬಳಿಕ ಅವಶ್ಯ ಇದ್ದರೆ ವಿಚಾರಣೆಗೆ ಹಾಜರಾಗಲು ಆರೋಪಿಗೆ ಸಮನ್ಸ್ ನೀಡುತ್ತಾರೆ’ ಎಂದರು.
ಸಿಬಿಐಗೆ ಮತ್ತೊಂದು ದೂರು
ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರು ಹಲವು ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದ್ದು, ಈ ಬಗ್ಗೆಯೂ ತನಿಖೆ ನಡೆಸುವಂತೆಸಾಮಾಜಿಕ ಹೋರಾಟಗಾರ ರವಿಕುಮಾರ್ ಕಂಚನಹಳ್ಳಿ ಸಿಬಿಐಗೆ ದೂರು ನೀಡಿದ್ದಾರೆ.
‘ಶೋಭಾ ಡೆವಲಪರ್ಸ್, ಪ್ರಸ್ಟೀಜ್ ಡೆವಲಪರ್ಸ್, ಪುರವಂಕರ ಡೆವಲಪರ್ಸ್ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಳ್ಕರ ಅವರ ಸಕ್ಕರೆ ಕಾರ್ಖಾನೆಗಳಲ್ಲಿ ಹೂಡಿಕೆಗೆ ಆದಾಯ ಮೂಲ ಯಾವುದು ಎಂಬದನ್ನೂ ಪರಿಶೀಲಿಸಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ದೂರನ್ನು ಇ–ಮೇಲ್ ಮೂಲಕ ಸಿಬಿಐಗೆ ಕಳುಹಿಸಲಾಗಿದ್ದು, ರಿಜಿಸ್ಟರ್ ಪೋಸ್ಟ್ ಮೂಲಕವೂ ಬುಧವಾರ ಕಳುಹಿಸಲಾಗುವುದು’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.