ADVERTISEMENT

ಮಲೆ ಮಹದೇಶ್ವರ ಹುಲಿ ಸಂರಕ್ಷಿತ ‍ಪ‍್ರದೇಶ: ಕೇಂದ್ರ ಉನ್ನತಾಧಿಕಾರ ಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 15:27 IST
Last Updated 13 ಸೆಪ್ಟೆಂಬರ್ 2025, 15:27 IST
   

ನವದೆಹಲಿ: ಹುಲಿಗಳ ವಾಸಕ್ಕೆ ಪೂರಕ ವಾತಾವರಣ ಹೊಂದಿರುವ ಮಲೆ ಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಸುಪ್ರೀಂ ಕೋರ್ಟ್‌ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸು ಮಾಡಿದೆ. 

ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯದಲ್ಲಿ ಇತ್ತೀಚೆಗೆ ಸಂಭವಿಸಿದ ಐದು ಹುಲಿಗಳ ಸಾವಿನ ಪ್ರಕರಣದ ಬಗ್ಗೆ ಸಮಿತಿ ತನಿಖೆ ನಡೆಸಿ 55 ಪುಟಗಳ ವರದಿ ಸಿದ್ಧಪಡಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ಪಶ್ಚಿಮ ಘಟ್ಟದಲ್ಲಿ ಪದೇ ಪದೇ ಸಂಭವಿಸುತ್ತಿರುವ ಇಂತಹ ಘಟನೆಗಳಿಂದಾಗಿ ಹುಲಿಗಳ ಸಂರಕ್ಷಣೆ ಕುರಿತು ಗಂಭೀರ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಸಮಿತಿ ಸಲಹೆ ನೀಡಿದೆ. 

ಮಹದೇಶ್ವರ ಬೆಟ್ಟ, ಹನೂರು ಹಾಗೂ ಯಡೆಯಾರಳ್ಳಿ ಮೀಸಲು ರಕ್ಷಿತಾರಣ್ಯವನ್ನು ಒಟ್ಟುಗೂಡಿಸಿ 906 ಚ.ಕಿ.ಮೀ ಅರಣ್ಯವನ್ನು ಮಲೆಮಹದೇಶ್ವರ ವನ್ಯಜೀವಿ ಧಾಮ ಎಂದು 2013ರಲ್ಲಿ ಘೋಷಿಸಲಾಗಿತ್ತು. ಈ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಅರಣ್ಯ ಇಲಾಖೆ 2017–18ರಲ್ಲಿ ಪ್ರಸ್ತಾವ ಕಳುಹಿಸಿತ್ತು. ಈ ಪ್ರಸ್ತಾವಕ್ಕೆ ರಾಜ್ಯ ವನ್ಯಜೀವಿ ಮಂಡಳಿ 2019ರಲ್ಲಿ ಅನುಮೋದನೆ ನೀಡಿತ್ತು.

ADVERTISEMENT

ವನ್ಯಧಾಮದಲ್ಲಿರುವ ಗ್ರಾಮಗಳು, ವಸತಿ ಪ್ರದೇಶಗಳ ವಿವರಗಳನ್ನು ಸ್ಪಷ್ಟವಾಗಿ ನಮೂದಿಸುವಂತೆ ಸೂಚಿಸಿ ‍‍‍‍ಪ್ರಾಧಿಕಾರವು ಪ್ರಸ್ತಾವ ವಾಪಸ್‌ ಕಳುಹಿಸಿತ್ತು. ಆ ಬಳಿಕ, ಅರಣ್ಯ ಇಲಾಖೆ ಪರಿಷ್ಕೃತ ಪ್ರಸ್ತಾವ ಸಲ್ಲಿಸಿತ್ತು.  ಘೋಷಣೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳೂ ಪೂರ್ಣಗೊಂಡಿದ್ದವು. ಜನಪ್ರತಿನಿಧಿಗಳ ವಿರೋಧದಿಂದಾಗಿ ಈ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಹುಲಿಗಳ ಸಾವಿನ ಬಗ್ಗೆ ತನಿಖೆ ನಡೆಸಿದ್ದ ಎನ್‌ಟಿಸಿಎ ವಿಶೇಷ ತನಿಖಾ ತಂಡವು ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಶಿಫಾರಸು ಮಾಡಿತ್ತು. ಇದೀಗ, ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕೆಂಬ ಬೇಡಿಕೆ ಮುನ್ನೆಲೆಗೆ ಬಂದಿದೆ.

ಸಿಇಸಿ ‍ಪ್ರಮುಖ ಶಿಫಾರಸುಗಳು

*ಮಾನವ–ಹುಲಿ ಸಂಘರ್ಷ ತಡೆಗೆ ಅಲ್ಪಾವಧಿ–ದೀರ್ಘಾವಧಿ ಕ್ರಮಗಳನ್ನು ಕೈಗೊಳ್ಳಬೇಕು. 

*ಹುಲಿ ಚಲನವಲನಗಳ ಮೇಲ್ವಿಚಾರಣೆಗೆ ಮತ್ತು ಮಾನವನ ಅಕ್ರಮ ಚಟುವಟಿಕೆಗಳನ್ನು ನೈಜ ಸಮಯದಲ್ಲಿ ಪತ್ತೆ ಹಚ್ಚಲು ಕ್ಯಾಮೆರಾ ಟ್ರ್ಯಾಪ್‌ ಹಾಗೂ ಸುಧಾರಿತ ಕೃತಕ ಬುದ್ಧಿಮತ್ತೆ (ಎಐ) ಪತ್ತೆ ವ್ಯವಸ್ಥೆಗಳನ್ನು ಸ್ಥಾಪಿಸಬೇಕು.

*ಸೂಕ್ಷ್ಮ ‍‍‍ಪ್ರದೇಶಗಳಲ್ಲಿ, ವಿಶೇಷವಾಗಿ ಗಡಿ ‍ಪ್ರದೇಶಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಜಿ‍ಪಿಎಸ್‌ ಆಧಾರಿತ ಗಸ್ತು ವ್ಯವಸ್ಥೆಯನ್ನು ದುಪ್ಪಟ್ಟುಗೊಳಿಸಬೇಕು. 

*ಕಾಡುಗಳಲ್ಲಿ ಜಾನುವಾರುಗಳು ಮೃತಪಟ್ಟಲ್ಲಿ ಕ್ಯಾಮೆರಾ ಟ್ರ್ಯಾಪ್ ಮೂಲಕ 24/7 ಮೇಲ್ವಿಚಾರಣೆ ನಡೆಸಬೇಕು. 

*ಐದು ಹುಲಿಗಳ ಸಾವಿಗೆ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಪ್ರಮುಖ ಕಾರಣ. ಇಂತಹ ಲೋಪಗಳಿಗೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಕೈಗೊಳ್ಳಬೇಕು. 

*ಜಾನುವಾರುಗಳು ಮೃತಪಟ್ಟ ಸಂದರ್ಭದಲ್ಲಿ ಜನರು ಪ್ರತೀಕಾರದಿಂದ ಕಾಡು ಪ್ರಾಣಿಗಳಿಗೆ ವಿಷವುಣಿಸುತ್ತಾರೆ. ಇದನ್ನು ನಿಯಂತ್ರಿಸಲು ಮಾನವ ಸಾವು/ಹಾನಿಗೆ ಸಕಾಲದಲ್ಲಿ ಪರಿಹಾರ ನೀಡಬೇಕು. ಜತೆಗೆ, ಜಾನುವಾರುಗಳು ಮೃತಪಟ್ಟಲ್ಲಿ ಪರಿಹಾರ ನೀಡಬೇಕು. ಇದಕ್ಕೆ ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಮೊತ್ತ ಮೀಸಲಿಡಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.