ADVERTISEMENT

ಸರ್ಕಾರ 1 ಸಾವಿರ ದಿನ ಪೂರೈಸಿದ ಸಂಭ್ರಮ: ಹಾವೇರಿಯಲ್ಲಿ ಇದೇ 14ಕ್ಕೆ ಸಮಾವೇಶ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 14:42 IST
Last Updated 10 ಫೆಬ್ರುವರಿ 2026, 14:42 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಂದು ಸಾವಿರ ದಿನಗಳು ಪೂರೈಸುತ್ತಿರುವ ಹೊತ್ತಿನಲ್ಲಿ, ಇದೇ 14 ರಂದು ಹಾವೇರಿಯಲ್ಲಿ ಸಮಾವೇಶ ಹಮ್ಮಿಕೊಳ್ಳಾಗಿದೆ. ಅಂದು ಒಂದು ಲಕ್ಷ ಜನರಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

‘ಹಕ್ಕು ಪತ್ರ ಎಂದರೆ ಕೇವಲ ಕಾಗದ ಅಲ್ಲ. ಇ– ಸ್ವತ್ತು ಕೊಡಬಹುದಾದ ಗಣಕೀಕೃತ ದಾಖಲೆ. ಯಾರೂ ನಕಲು ಮಾಡಲು ಸಾಧ್ಯವಾಗದ ಹಕ್ಕು ಪತ್ರ ಕೊಡಲಿದ್ದೇವೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇದಕ್ಕೂ ಮುನ್ನ ಸಮಾವೇಶದ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕ ಶ್ರೀನಿವಾಸ ಮಾನೆ ಹಾಗೂ ಫಲಾನುಭವಿಗಳ ಜತೆ ಅವರು ಸಂವಾದ ನಡೆಸಿದರು.

‘ನಮ್ಮ ಸರ್ಕಾರ ಶೇ 100ರಷ್ಟು ಭೂ ಗ್ಯಾರಂಟಿ ಕೊಡುತ್ತಿದೆ. ಹಕ್ಕುಪತ್ರದ ಜತೆ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಣಿ ಕೂಡ ಮಾಡಿಕೊಡುತ್ತೇವೆ. ದಾಖಲೆಗಳಿಲ್ಲದ ಗ್ರಾಮಗಳಲ್ಲಿ ವಾಸಿಸುವವರಿಗೆ ಹಕ್ಕುಪತ್ರ ನೀಡುತ್ತಿದ್ದೇವೆ. ದರ್ಖಾಸ್ತು, ಬಗರ್ ಹುಕುಂನಲ್ಲಿ ಮಂಜೂರಾದ ಜಮೀನುಗಳಿಗೆ ದಾಖಲೆ ಇರಲಿಲ್ಲ. ಅತಂತ್ರದಲ್ಲಿ ಬದುಕುತ್ತಿರುವವರಿಗೆ ಭರವಸೆ ನೀಡಿದ್ದೇವೆ. ಇದು ನಮ್ಮ ಸರ್ಕಾರದ ಮಹತ್ವದ ಸಾಧನೆ’ ಎಂದು ಹೇಳಿದರು.

ADVERTISEMENT

‘ಸರ್ಕಾರಕ್ಕೆ ಭೂಮಾಲೀಕತ್ವದ ವಿಚಾರದಲ್ಲಿ ಸ್ಪಷ್ಟತೆ ಇದೆ. ರಾಜ್ಯದಲ್ಲಿ ಸುಮಾರು 49 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿ ಇವೆ. ಸಂಬಂಧಪಟ್ಟವರ ಹೆಸರಿಗೆ ಜಮೀನು ಮಾಡಿಕೊಡಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಭೂಮಾಲೀಕತ್ವ ಎಂದರೆ ಭೂವ್ಯಾಜ್ಯ ಎನ್ನುವ ಹಾಗಾಗಿದೆ. ಕೋರ್ಟ್‌, ಕಚೇರಿ ಅಲೆಯುವುದು ಹೆಚ್ಚಾಗಿತ್ತು. ಆದರೆ, ಈಗ ಸರ್ಕಾರದಿಂದಲೇ ಹಕ್ಕುಪತ್ರ ವಿತರಿಸಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.