ಹುಬ್ಬಳ್ಳಿ: 'ಮುಖ್ಯಮಂತ್ರಿ ಹುದ್ದೆಗೆ ನಾನು ಫ್ರಂಟ್ ರನ್ನರ್ರೂ ಅಲ್ಲ, ಬ್ಯಾಕ್ ರನ್ನರ್ರೂ ಅಲ್ಲ. ಈ ಕುರಿತು ಪಕ್ಷದ ವರಿಷ್ಠರು ನನ್ನ ಜತೆ ಯಾವುದೇ ಚರ್ಚೆ ಸಹ ಮಾಡಿಲ್ಲ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
'ಬಿ.ಎಸ್. ಯಡಿಯೂರಪ್ಪ ಅವರಿಗೆ ಪಕ್ಷದ ವರಿಷ್ಠರು ಸಿ.ಎಂ. ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಹೇಳಿದ್ದಾರೊ, ಬಿಟ್ಟಿದ್ದಾರೊ ಎನ್ನುವ ಸಂಗತಿ ಸಹ ನನಗೆ ಗೊತ್ತಿಲ್ಲ' ಎಂದು ಅವರು ಮಾಧ್ಯದವರಿಗೆ ತಿಳಿಸಿದರು
'ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ನಾಯಕರ ಮಧ್ಯೆ ಏನೆಲ್ಲ ಮಾತುಕತೆ ನಡೆದಿದೆ ಎನ್ನುವ ವಿಷಯ ನನಗೆ ಗೊತ್ತಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಇದ್ದಾರೆ. ಸಿ.ಎಂ. ಬದಲಾವಣೆ ಹಾಗೂ ಮುಂದಿನ ಸಿ.ಎಂ. ಯಾರಾಗಬೇಕು ಎನ್ನುವ ನಿರ್ಧಾರ ಅವರು ತೆಗೆದುಕೊಳ್ಳುತ್ತಾರೆ' ಎಂದು ಹೇಳಿದರು.
'ಕಳೆದ ನಾಲ್ಕು ದಿನಗಳಿಂದ ಸಂಸತ್ತಿನಲ್ಲಿ ಚರ್ಚೆ ನಡೆಯಲು ವಿರೋಧ ಪಕ್ಷಗಳು ಬಿಡುತ್ತಿಲ್ಲ. ನಾವು ಎಲ್ಲ ವಿಷಯಗಳ ಚರ್ಚೆಗೂ ಸಿದ್ಧರಿದ್ದೇವೆ. ಮುಕ್ತವಾಗಿ ಚರ್ಚೆ ನಡೆಸಲು ಅವಕಾಶ ಕೊಡಿ ಎಂದು ವಿರೋಧ ಪಕ್ಷದ ಮುಖಂಡರನ್ನು ಭೇಟಿಯಾಗಿ ವಿನಂತಿಸಿಕೊಂಡಿದ್ದೇನೆ. ಆದರೂ, ಅವರು ಕಲಾಪಕ್ಕೆ ಅಡ್ಡಿಯಾಗುತ್ತಿದ್ದಾರೆ. ಸೋಮವಾರದಿಂದಲಾದರೂ ಅವಕಾಶ ಕೊಡುತ್ತಾರೋ ಇಲ್ಲವೋ ನೋಡಬೇಕು' ಎಂದರು.
'ರಾಹುಲ್ ಗಾಂಧಿ ಅವರು ತಮ್ಮ ಪೋನ್ ಕದ್ದಾಲಿಕೆಯಾಗಿದೆ, ಮೋದಿ ನನಗೆ ಹೆದರುತ್ತಿದ್ದಾರೆ ಎಂದಿದ್ದಾರೆ. ಅವರದ್ದು ಬಾಲಿಶತನ ಹಾಗೂ ಆಧಾರ ರಹಿತ ಆರೋಪ. ಫೋನ್ ಕದ್ದಾಲಿಕೆ ಆಗಿದ್ದರೆ ಎಫ್.ಐ.ಆರ್ ದಾಖಲಿಸಿ, ಮೊಬೈಲ್ ಒಪ್ಪಿಸಲಿ' ಎಂದ ಜೋಶಿ, 'ಅವರ ಮೊಬೈಲ್'ನಲ್ಲಿ ಪೆಗಾಸಸ್ ಅಪ್ಲಿಕೇಷನ್ ಇತ್ತೋ ಇಲ್ಲವೋ ಎನ್ನುವ ಕುರಿತು ತನಿಖೆ ನಡೆಯಲಿ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.