ADVERTISEMENT

ಚೈತ್ರಾ ಕುಂದಾಪುರ ‍ಪ್ರಕರಣ: 800 ಪುಟಗಳ ಆರೋಪ ಪಟ್ಟಿ ಸಲ್ಲಿಕೆ

ಹಾಲವೀರಪ್ಪ ಸ್ವಾಮೀಜಿ, ಚೈತ್ರಾ ಸೇರಿದಂತೆ 8 ಮಂದಿ ವಿರುದ್ಧದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2023, 23:30 IST
Last Updated 8 ನವೆಂಬರ್ 2023, 23:30 IST
ಚೈತ್ರಾ
ಚೈತ್ರಾ   

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ, ಹೋಟೆಲ್‌ ಉದ್ಯಮಿಗೆ ವಂಚಿಸಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಸಿಬಿ ಪೊಲೀಸರು 3ನೇ ಎಸಿಎಂಎಂ ನ್ಯಾಯಾಲಯಕ್ಕೆ 800 ಪುಟಗಳ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.

ವಂಚನೆ ಪ್ರಕರಣದಲ್ಲಿ ಪೂರಕ ಪುರಾವೆ ಸಹಿತ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಉದ್ಯಮಿ ಗೋವಿಂದಬಾಬು ಪೂಜಾರಿ ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಸಿಸಿಬಿ ಪೊಲೀಸರು, ಹಿಂದುತ್ವ ಸಂಘಟನೆಗಳ ಕಾರ್ಯಕರ್ತೆ ಎಂದು ಗುರುತಿಸಿಕೊಂಡಿದ್ದ ಚೈತ್ರಾ , ಹೊಸಪೇಟೆ ಸಮೀಪದ ಹಿರೇಹಡಗಲಿ ಹಾಲಸ್ವಾಮಿ ಮಠದ ಹಾಲವೀರಪ್ಪ ಸ್ವಾಮೀಜಿ, ಗಗನ್ ಕಡೂರ್, ಶ್ರೀಕಾಂತ್ ಸೇರಿದಂತೆ 8 ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

ADVERTISEMENT

75 ಮಂದಿ ಹೇಳಿಕೆ ದಾಖಲು: ಬಂಡೇಪಾಳ್ಯ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ತನಿಖೆ ಕೈಗೊಳ್ಳಲಾಗಿತ್ತು. ಆರೋಪಿಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಬಂಧಿಸಲಾಗಿತ್ತು. ಸಿಸಿಬಿ ಘಟಕದ ಮಹಿಳಾ ಸಂರಕ್ಷಣಾ ದಳದ ಎಸಿಪಿ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿತ್ತು. 75 ಸಾಕ್ಷಿದಾರರ ಹೇಳಿಕೆ ದಾಖಲಿಸಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ವಂಚನೆಯಾದ ಹಣದಲ್ಲಿ ಶೇ 90ರಷ್ಟು ಜಪ್ತಿ ಮಾಡಿಕೊಳ್ಳಲಾಗಿದೆ. ಉದ್ಯಮಿಗೆ ಹೇಗೆ ಆಮಿಷ ಒಡ್ಡಲಾಗಿತ್ತು. ಯಾವ ಸ್ಥಳದಲ್ಲಿ ಹಣ ಪಡೆಯಲಾಗಿತ್ತು. ಎಲ್ಲೆಲ್ಲಿ ಸಭೆ ನಡೆಸಿದ್ದರು ಎಂಬ ಮಾಹಿತಿಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.’

‘ಡಿಜಿಟಲ್‌ ಸಾಕ್ಷ್ಯ, ಎಂಟು ಮಂದಿ ಆರೋಪಿಗಳ ಬ್ಯಾಂಕ್‌ ವ್ಯವಹಾರದ ವಿವರ, ಆರೋಪಿಗಳ ನಡುವೆ ನಡೆದ ಮೊಬೈಲ್‌ ಸಂದೇಶಗಳ ವಿನಿಮಯದ ದಾಖಲೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳು ವಿವಿಧ ಸ್ಥಳಗಳಲ್ಲಿ ಸಭೆ ನಡೆಸಿದ್ದರು. ಆ ಸ್ಥಳಕ್ಕೂ ಆರೋಪಿಗಳನ್ನೇ ಕರೆದೊಯ್ದು ಮಹಜರು ನಡೆಸಲಾಗಿತ್ತು. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಸೇರಿಸಲಾಗಿದೆ’ ಎಂದು ಹೇಳಿದರು.

’ಆರೋಪಿಗಳು ಉದ್ಯಮಿಯಿಂದ ಪಡೆದಿದ್ದ ಹಣದ ಪೈಕಿ ₹4.11 ಕೋಟಿ ಜಪ್ತಿ ಮಾಡಿಕೊಳ್ಳಲಾಗಿತ್ತು. ₹25 ಲಕ್ಷ ಕೊಟ್ಟು ಹಾಲವೀರಪ್ಪ ಸ್ವಾಮೀಜಿ ಖರೀದಿಸಿದ್ದ ಇನ್ನೋವಾ ಕಾರನ್ನು ಸುಪರ್ದಿಗೆ ಪಡೆಯಲಾಗಿತ್ತು. ಆರೋಪಿಗಳು ಎಲ್ಲೆಲ್ಲಿ ಹಣ ವಿನಿಯೋಗಿಸಿದ್ದರು ಎಂದು ಮಾಹಿತಿ ಸಹ ಆರೋಪಟ್ಟಿಯಲ್ಲಿ ಇದೆ’ ಎಂದು ಮೂಲಗಳು ತಿಳಿಸಿವೆ.

ಹಾಲವೀರಪ್ಪ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.