ADVERTISEMENT

‘ಚಂದ್ರಯಾನ 2: ಭರದ ಸಿದ್ಧತೆ’

2019ರ ಮಾರ್ಚ್‌ ಒಳಗೆ ಉಪಗ್ರಹ ಉಡಾವಣೆ: ಇಸ್ರೋ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2018, 17:30 IST
Last Updated 10 ಅಕ್ಟೋಬರ್ 2018, 17:30 IST

ಬಳ್ಳಾರಿ: ‘ಚಂದ್ರಯಾನ 2ರ ಯೋಜನೆ ಜಾರಿಗೆ ಭರದ ಸಿದ್ಧತೆ ನಡೆದಿದ್ದು, ಮುಂದಿನ ಮಾರ್ಚ್‌ ಒಳಗೆ ಉಪಗ್ರಹದ ಉಡಾವಣೆ ನಡೆಯಲಿದೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಕೇಂದ್ರವಾದ ಶ್ರೀಹರಿಕೋಟಾದ ಸತೀಶ್‌ ಧವನ್‌ ಸ್ಪೇಸ್‌ ಸೆಂಟರ್‌ನ ವಿಎಎಲ್‌ಎಫ್‌ ವಿಭಾಗದ ಮುಖ್ಯ ವ್ಯವಸ್ಥಾಪಕ ವಿ.ನಾಗರಾಜು ತಿಳಿಸಿದರು.

ನಗರದ ಬಿಐಟಿಎಂ ಕಾಲೇಜಿನಲ್ಲಿ ಬುಧವಾರ ಕೇಂದ್ರವು ಏರ್ಪಡಿಸಿದ್ದ ವಿಶ್ವ ಅಂತರಿಕ್ಷ ಸಪ್ತಾಹದ ಸಮಾರೋಪ ಭಾಷಣ ಮಾಡಿದ ಅವರು, ‘ಚಂದ್ರಯಾನ 2ರ ಬಳಿಕ, 2022ರ ಆಗಸ್ಟ್‌ ಒಳಗೆ ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳಿಸುವ ಯೋಜನೆಯಲ್ಲಿ ಇಸ್ರೋ ಗಂಭೀರವಾಗಿ ತೊಡಗಿಕೊಳ್ಳಲಿದೆ’ ಎಂದರು.

‘ಮಾನವ ಕೇಂದ್ರಿತ ಬಾಹ್ಯಾಕಾಶ ಯೋಜನೆಯಲ್ಲಿ ಹಲವು ಸವಾಲುಗಳಿವೆ. ಬಾಹ್ಯಾಕಾಶದಲ್ಲಿ ಬಳಸಬೇಕಾದ ಆಹಾರ, ಔಷಧ ಮತ್ತು ಬಾಹ್ಯಾಕಾಶಕ್ಕೆ ಮರು ಪ್ರವೇಶದಂಥ ವಿಷಯಗಳ ಕುರಿತು ಹೆಚ್ಚಿನ ಸಂಶೋಧನೆಗಳನ್ನು ನಡೆಸಬೇಕಾಗಿದೆ’ ಎಂದರು.

ADVERTISEMENT

ಒಪ್ಪಂದ: ‘ಗಗನನೌಕೆಯನ್ನು ನಿಯಂತ್ರಿಸಲು ಹಾಗೂ ಚಾಲನೆ ಮಾಡಲು ಗಗನಯಾತ್ರಿಗಳಿಗೆ ಅಗತ್ಯವಾದ ತರಬೇತಿಗಾಗಿ ರಷ್ಯಾ ಜೊತೆಗೆ ಇತ್ತೀಚೆಗಷ್ಟೇ ಒಪ್ಪಂದ ಮಾಡಿಕೊಳ್ಳಲಾಗಿದೆ’ಎಂದರು.

‘ವಿಶ್ವದ ಇತರೆ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಿಗೆ ಹೋಲಿಸಿದರೆ ಇಸ್ರೋ ಶೇ 1ಕ್ಕಿಂತಲೂ ಕಡಿಮೆ ಅನುದಾನದಲ್ಲೇ ಕಾರ್ಯನಿರ್ವಹಿಸುತ್ತಿದೆ. ಈ ನಡುವೆಯು ಸಂಸ್ಥೆ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಪವಾಡಗಳನ್ನೇ ಮಾಡುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನ ಕುರಿತು ಜಾಗೃತಿ ಮೂಡಿಸಲು ಶೀಘ್ರದಲ್ಲೇ ಇಸ್ರೋ ಟಿ.ವಿ. ವಾಹಿನಿಯೂ ಆರಂಭವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.