ADVERTISEMENT

ಚಾರ್ಮಾಡಿ, ಶಿರಾಡಿ ಮಾರ್ಗ ಬಂದ್‌; ಸಂಕಷ್ಟದಲ್ಲಿ ಬೆಳ್ತಂಗಡಿಯ 35 ಕುಟುಂಬ

ಬೆಂಗಳೂರು– ಮಂಗಳೂರು ಸಂಚಾರ ಅಸ್ತವ್ಯಸ್ತ l

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 10:19 IST
Last Updated 10 ಆಗಸ್ಟ್ 2019, 10:19 IST
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಸಂಗಮ ಕ್ಷೇತ್ರವಾದ ದಕ್ಷಿಣ ಕನ್ನಡದ ಉಪ್ಪಿನಂಗಡಿಯ ಕೆಲವೊಂದು ತಗ್ಗುಪ್ರದೇಶಗಳು ಶುಕ್ರವಾರ ಜಲಾವೃತವಾಗಿವೆ  ಚಿತ್ರ: ವಸಂತ್‌ ನಾಯ್ಕ್‌
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಸಂಗಮ ಕ್ಷೇತ್ರವಾದ ದಕ್ಷಿಣ ಕನ್ನಡದ ಉಪ್ಪಿನಂಗಡಿಯ ಕೆಲವೊಂದು ತಗ್ಗುಪ್ರದೇಶಗಳು ಶುಕ್ರವಾರ ಜಲಾವೃತವಾಗಿವೆ  ಚಿತ್ರ: ವಸಂತ್‌ ನಾಯ್ಕ್‌   

ಮಂಗಳೂರು/ ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಭಾರಿ ಪ್ರಮಾಣದ ಮಳೆ ಹಾಗೂ ಗಾಳಿಯಿಂದಾಗಿ ಭೂಕುಸಿತ, ಗುಡ್ಡ ಕುಸಿತ ಮುಂದುವರಿದಿದ್ದು, ಇದೇ 14ರ ಮಧ್ಯರಾತ್ರಿವರೆಗೂ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಗುಡ್ಡ ಕುಸಿತ ಜಾಗದಲ್ಲಿ ಪದೇ ಪದೇ ವಾಹನ ದಟ್ಟಣೆ ಉಂಟಾಗುತ್ತಿರುವುದರಿಂದ ಕುಸಿತದ ಮಣ್ಣನ್ನು ತೆರವುಗೊಳಿಸಲು ಕಷ್ಟವಾಗುತ್ತಿದೆ. ಅಲ್ಲದೇ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಇನ್ನಷ್ಟು ಹಾನಿಯಾಗುವ ಸಾಧ್ಯತೆ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌, ವಾಹನ ಸಂಚಾರ ನಿಷೇಧಿಸಿದ್ದಾರೆ.

ಶಿರಾಡಿ ಘಾಟಿಯಲ್ಲಿ ಸಕಲೇಶಪುರ ಬಳಿ ಭೂಕುಸಿತ ಉಂಟಾಗುತ್ತಿದ್ದು, ಶಿರಾಡಿಯಲ್ಲಿ ಇದೇ 12 ರವರೆಗೆ ಸಂಚಾರ ಬಂದ್‌ ಮಾಡಿ, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸಂಪಾಜೆ ಘಾಟಿಯಲ್ಲಿ ಲಘು ವಾಹನ ಮತ್ತು ಕೆಎಸ್‌ಆರ್‌ಟಿಸಿ ಪ್ರಯಾಣಿಕ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಹೆದ್ದಾರಿಯಲ್ಲಿ ನೇತ್ರಾವತಿ ನದಿ ನೀರು ಹರಿಯುತ್ತಿದ್ದು, ಬೆಂಗಳೂರು–ಮಂಗಳೂರು ವಾಹನ ಸಂಚಾರ ಶುಕ್ರವಾರ ಮಧ್ಯಾಹ್ನದಿಂದ ಸ್ಥಗಿತವಾಗಿದೆ. ಬೆಳ್ತಂಗಡಿಯಲ್ಲಿ ಪ್ರವಾಹ ಸ್ಥಿತಿ ಉದ್ಭವಿಸಿದ್ದು, ತಾಲ್ಲೂಕಿನ ಕೊಲ್ಲಿಯಲ್ಲಿ 35ಕ್ಕೂ ಹೆಚ್ಚು ಕುಟುಂಬಗಳು ಪ್ರವಾಹದಲ್ಲಿ ಸಿಲುಕಿವೆ.

ವಿಮಾನ ಹಾರಾಟ ವ್ಯತ್ಯಯ: ಮಂಗಳೂರಿನಿಂದ ಹೊರಡುವ ವಿಮಾನಗಳ ಹಾರಾಟದಲ್ಲಿ ಶುಕ್ರವಾರವೂ ವಿಳಂಬವಾಗಿದೆ. ಬೆಂಗಳೂರು–ಮಂಗಳೂರು ರೈಲು ಸಂಚಾರವೂ ಸ್ಥಗಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.