ADVERTISEMENT

ಮಹಾಮಜ್ಜನಕ್ಕೆ ಆಧುನಿಕ ಸ್ಪರ್ಶ ನೀಡಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 0:02 IST
Last Updated 24 ಮಾರ್ಚ್ 2023, 0:02 IST
   

ಹಾಸನ: ಶ್ರವಣಬೆಳಗೊಳ ಎಂದರೆ ನೆನಪಾಗುವುದು ಬಾಹುಬಲಿಯ ಮಹಾನ್‌ ಮೂರ್ತಿ ಹಾಗೂ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ. ಅವರು, 12 ವರ್ಷಗಳಿ ಗೊಮ್ಮೆ ಬಾಹುಬಲಿಗೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಆಧುನಿಕತೆಯ ಸ್ಪರ್ಶ ಕೊಟ್ಟವರು. ಅವರ ನೇತೃತ್ವದಲ್ಲೇ 4 ಮಹಾಮಸ್ತಕಾಭಿಷೇಕಗಳು ಅಚ್ಚುಕಟ್ಟಾಗಿ ನೆರವೇರಿವೆ. 1970ರಲ್ಲಿ ಶ್ರವಣಬೆಳಗೊಳ ಮಠದ ಪೀಠಾಧಿಪತಿಯಾದ ಸ್ವಾಮೀಜಿ, 1981ರಲ್ಲಿ ನಡೆದ ಗೊಮ್ಮಟೇಶ್ವರನ ಸಹಸ್ರಾಬ್ಧಿ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನೆರವೇರಿಸಿದ್ದರು. ಕಾಲ ಕಳೆದಂತೆ ಮಹಾಮಸ್ತಕಾಭಿಷೇಕದ ವೀಕ್ಷಣೆ, ಆಯೋಜನೆಯಲ್ಲಿ ತಮ್ಮದೇ ಆದ ವಿಶಿಷ್ಟ ಯೋಚನೆಗಳ ಮೂಲಕ ಮಹತ್ತರ ಬದಲಾವಣೆ ತಂದಿದ್ದರು.

ಮೊದಲಿಗೆ, ಮಹಾಮಸ್ತಕಾಭಿಷೇಕಕ್ಕೆ ಬಂದವರಿಗೆ ತಂಗಲು ತೆಂಗಿನಗರಿಯ ಕುಟೀರಗಳಿರುತ್ತಿದ್ದವು. ನಂತರ, ಬಿದಿರಿನ ಚಾಪೆಯ ಕುಟೀರಗಳು ಬಂದವು. 1981ರ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಬಟ್ಟೆಯ ಟೆಂಟ್‌, ಟಾರ್ಪಾಲಿನ ಟೆಂಟ್‌ಗಳು ಬಂದವು. 1993ರಲ್ಲಿ ಸ್ವಿಸ್‌ ಮಾದರಿಯ ಕಾಟೇಜ್‌ಗಳನ್ನು ನಿರ್ಮಿಸಲಾಗಿತ್ತು. 2006ರ ಹೊತ್ತಿಗೆ ಝಿಂಕ್‌ ಶೀಟ್‌ ಕಾಟೇಜ್‌ ಬಂತು. 2018ರಲ್ಲೂ ಸುಧಾರಿತ ವಿನ್ಯಾಸದ ಕುಟೀರಗಳನ್ನು ನಿರ್ಮಿಸಲಾಗಿತ್ತು.

2018ರಲ್ಲಿ ವಿಶೇಷ ತಂತ್ರಜ್ಞಾನದ ಅಟ್ಟಳಿಗೆಗಳನ್ನು ನಿರ್ಮಿಸಿದ್ದು ವಿಶೇಷ.

ADVERTISEMENT

‘ಮೂರ್ತಿಗೆ ಜಿಡ್ಡು ಅಂಟುತ್ತದೆ’ ಎಂಬ ಕಾರಣಕ್ಕೆ ತುಪ್ಪ, ಮೊಸರಿನ ಅಭಿಷೇಕವನ್ನು ನಿಲ್ಲಿಸಿದ್ದು, ಸಂಪ್ರದಾಯಕ್ಕೆ ಚ್ಯುತಿ ಬರದಂತೆ ಮೂರ್ತಿಯ ಪದತಲದಲ್ಲಿರುವ ಪಂಚಲೋಹದ ಪ್ರತಿಬಿಂಬಕ್ಕೆ ಅದೇ ಅಭಿಷೇಕ ಮಾಡುವ ಪದ್ಧತಿಯನ್ನು ಸ್ವಾಮೀಜಿ ರೂಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.