ಕಂಪ್ಲಿ: ಪೋಷಕರು ವಿವಾಹವಾಗುವಂತೆ ಒತ್ತಾಯಿಸಿದ್ದನ್ನು ವಿರೋಧಿಸಿ ಇಲ್ಲಿಯ ಬಾಲಕಿಯೊಬ್ಬಳು ರಕ್ಷಣೆ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಪ್ರಾಥಮಿಕ ಶಾಲೆ ಅರ್ಧಕ್ಕೆ ಬಿಟ್ಟಿರುವ ಬಾಲಕಿ ಕಬ್ಬಿನಹಾಲು ಮಾರಾಟ ಮಾಡುವ ಮೂಲಕ ಪೋಷಕರಿಗೆ ಆಸರೆಯಾಗಿದ್ದಳು. ಆದರೆ, ಬಾಲಕಿಯ ವಿರೋಧ ನಡುವೆಯೂ ಪೋಷಕರು ಏ. 15ರಂದು ವಿವಾಹ ನೆರವೇರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಇದನ್ನು ವಿರೋಧಿಸಿದ ಆಕೆ, ಏ.13ರಂದು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ನೀಡುವಂತೆ ಪಿಎಸ್ಐ ವಿರೂಪಾಕ್ಷಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದಾಳೆ.
ಬಳಿಕ ತಹಶೀಲ್ದಾರ್ ಮಾರ್ಗದರ್ಶನದಲ್ಲಿ ಪಿಎಸ್ಐ, ಅಂಗನವಾಡಿ ಮೇಲ್ವಿಚಾರಕಿ ಲತೀಫಾ ಬೇಗಂ, ಮಕ್ಕಳ ಸಹಾಯವಾಣಿ ತಾಲ್ಲೂಕು ಸಂಯೋಜಕಿ ನೇತ್ರಾ ಅವರು ಬಾಲಕಿಯ ಪೋಷಕರಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಅರಿವು ಮೂಡಿ
ಸಿದ್ದಾರೆ. ಇದಾದ ನಂತರ ಬಾಲಕಿ ತನ್ನ ಮನೆಗೆ
ತೆರಳಲು ನಿರಾಕರಿಸಿದ್ದರಿಂದ ಏ.13ರಂದು ಸ್ಥಳೀಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ನಿಲಯದಲ್ಲಿ ವಸತಿಗೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಬಾಲಕಿಯನ್ನು ಏ.15ರಂದು ಬಳ್ಳಾರಿಯ ಸರ್ಕಾರಿ ಬಾಲಕಿಯರ ಪೋಷಣಾ ಕೇಂದ್ರದಲ್ಲಿ ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ಗೌಸಿಯಾ ಬೇಗಂ ಶನಿವಾರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.