ಗೋಕಾಕ: ತಾಲ್ಲೂಕಿನ ಕೊಣ್ಣೂರ ಪುರಸಭೆ ವ್ಯಾಪ್ತಿಯಲ್ಲಿ ಶುಕ್ರವಾರ, ಅಣ್ಣನೇ ತನ್ನ ತಂಗಿಯ ಬಾಲ್ಯವಿವಾಹವನ್ನು ತಪ್ಪಿಸಿದ್ದಾನೆ.
ಹುಕ್ಕೇರಿ ತಾಲ್ಲೂಕಿನ ಗ್ರಾಮವೊಂದರ 15 ವರ್ಷದ ಬಾಲಕಿ ವಿದ್ಯಾಭ್ಯಾಸಕ್ಕಾಗಿ ಘಟಪ್ರಭಾದ ಸೋದರತ್ತೆ ಮನೆಯಲ್ಲಿದ್ದಳು. ಆಕೆಯನ್ನು ಸೊಸೆಯನ್ನಾಗಿ ಮಾಡಿಕೊಳ್ಳಲು ಮಹಿಳೆ ಪೋಷಕರ ಕಣ್ತಪ್ಪಿಸಿ ಕೊಣ್ಣೂರಿನ ಮನೆಯೊಂದರಲ್ಲಿ ವಿವಾಹಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.
ಕೊನೆ ಕ್ಷಣದಲ್ಲಿ ಮಾಹಿತಿ ಪಡೆದ ಸಹೋದರ, ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಮಯ ಪ್ರಜ್ಞೆ ಮೆರೆದಿದ್ದಾನೆ.
‘ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿಗಳು ಕೊಣ್ಣೂರಲ್ಲಿ ಪೊಲೀಸರೊಂದಿಗೆ ತೆರಳಿ ವಿಚಾರಿಸಿದಾಗ, ಇಲ್ಲಿ ಯಾವುದೇ ವಿವಾಹ ನಡೆಯುತ್ತಿಲ್ಲ. ದೇವರ ಪೂಜೆಗೆ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಆ ಕುಟುಂಬದವರು ಹೇಳಿದರು. ವಧು–ವರ ಕೂಡ ಇರಲಿಲ್ಲ’ ಎಂದು ಅಂಗನವಾಡಿ ಮೇಲ್ವಿಚಾರಕಿ ಶಶಿಕಲಾ ಗೂಡಮಾಲೆ ತಿಳಿಸಿದರು.
ಕೆಲವು ತಿಂಗಳ ಹಿಂದೆ ಬಾಲ್ಯ ವಿವಾಹಕ್ಕೆ ತಯಾರಿ ನಡೆಸಿದ್ದ ಬಾಲಕಿಯ ಸೋದರತ್ತೆ ವಿರುದ್ಧ, ಬಾಲಕಿಯ ಪೋಷಕರು ಘಟಪ್ರಭಾ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ. 18 ವರ್ಷ ತುಂಬುವವರೆಗೂ ಮದುವೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಸಹ ಬರೆದುಕೊಟ್ಟಿದ್ದರು.ಬಾಲಕಿ ಪತ್ತೆಗಾಗಿ ಹುಡುಕಾಟ ನಡೆದಿದೆ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.