ನವದೆಹಲಿ: ಸಿರಿಧಾನ್ಯಯುಕ್ತ ಮಧ್ಯಾಹ್ನದ ಬಿಸಿಯೂಟ ಸೇವನೆಯಿಂದಮೂರು ತಿಂಗಳ ಅವಧಿಯಲ್ಲಿ ಶಾಲಾ ಮಕ್ಕಳ ಬೆಳವಣಿಗೆಯಲ್ಲಿ ಗಮನಾರ್ಹ ಪ್ರಗತಿ ಸಾಧ್ಯವಿದೆ. ಬೆಂಗಳೂರಿನ ಮಕ್ಕಳ ಆಹಾರ ಸೇವನೆ ಹವ್ಯಾಸ ಆಧರಿಸಿ ಸಿರಿಧಾನ್ಯಯುಕ್ತ ಬಿಸಿಯೂಟದ ಕುರಿತು ಮೊದಲ ಬಾರಿಗೆ ವೈಜ್ಞಾನಿಕವಾಗಿ ನಡೆಸಿದ ಅಧ್ಯಯದಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಬೆಂಗಳೂರು ಹೊರವಲಯದ 4 ಶಾಲೆಗಳ ಮಕ್ಕಳಿಗೆ ಸಿರಿಧಾನ್ಯ ಬಳಸಿ ತಯಾರಿಸಿದ ವಿವಿಧ ಖಾದ್ಯಗಳನ್ನು ಮೂರು ತಿಂಗಳ ಕಾಲ ಉಣಿಸಲಾಯಿತು. ಸಾಮಾನ್ಯ ಬಿಸಿಯೂಟ ಸೇವಿಸುವ ಗುಂಪಿನ ಮಕ್ಕಳಿಗೆ ಹೋಲಿಸಿದರೆ, ಸಿರಿಧಾನ್ಯಯುಕ್ತ ಬಿಸಿಯೂಟ ಸೇವಿಸಿದ ಮಕ್ಕಳಲ್ಲಿ ಎರಡು ಮುಖ್ಯ ಅಂಶಗಳು ಕಂಡುಬಂದಿವೆ. ಮಕ್ಕಳ ಕುಂಠಿತ ಬೆಳವಣಿಗೆಗೆಸಿರಿಧಾನ್ಯದ ಆಹಾರಗಳು ತಡೆದಿವೆ. ಮಕ್ಕಳ ತೂಕಕ್ಕೆ ತಕ್ಕ ಎತ್ತರ ಅನುಪಾತದಲ್ಲಿ (ಬಾಡಿ ಮಾಸ್ ಇಂಡೆಕ್ಸ್– ಬಿಎಂಐ) ಸುಧಾರಣೆ ಕಂಡುಬಂದಿದೆ. ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದಲ್ಲಿ ಸಿರಿಧಾನ್ಯ ಖಾದ್ಯಗಳನ್ನು ಪರಿಚಯಿಸುವುದರಿಂದ ಶಾಲೆಗೆ ಹೋಗುವ ಮಕ್ಕಳ ಪೌಷ್ಟಿಕತೆಯ ಮಟ್ಟ ಗಣನೀಯವಾಗಿ ಏರಿಕೆಯಾಗಲಿದೆ ಎಂದು ವರದಿ ಅಭಿಪ್ರಾಯಪಟ್ಟಿದ್ದು, ಬುಧವಾರ ಇಲ್ಲಿ ನಡೆದ ನೀತಿ ಆಯೋಗದ ಕಾರ್ಯಕ್ರಮದಲ್ಲಿ ಅದನ್ನು ಬಿಡುಗಡೆ ಮಾಡಲಾಯಿತು.
ಹೈದರಾಬಾದ್ನ ಇಂಟರ್ನ್ಯಾಷನಲ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಸೆಮಿ ಅರಿಡ್ ಟ್ರೊಪಿಕ್ಸ್ (ಐಸಿಆರ್ಐಎಸ್ಎಟಿ) ವಿಜ್ಞಾನಿಗಳ ಜತೆ ಸರ್ಕಾರೇತರ ಸಂಘಟನೆಗಳಾದ ಸ್ಮಾರ್ಟ್ ಫುಡ್ ಹಾಗೂ ಅಕ್ಷಯ ಪಾತ್ರೆ ಪ್ರತಿಷ್ಠಾನಗಳು ಕೈಜೋಡಿಸಿದ್ದವು.
ಉತ್ತಮ ಗುಣಮಟ್ಟದ ಸಿರಿಧಾನ್ಯಗಳಿಂದ ಮಕ್ಕಳಿಗೆ ದುಪ್ಪಟ್ಟು ಪ್ರಮಾಣದ ಕಬ್ಬಿಣದ ಅಂಶ ದೊರೆಯುತ್ತದೆ ಎಂದು ಐಸಿಆರ್ಐಎಸ್ಎಟಿಯ ಪೌಷ್ಟಿಕಾಂಶ ತಜ್ಞೆ ಎಸ್.ಅನಿತಾ ಹೇಳಿದ್ದಾರೆ.
ಸಿರಿಧಾನ್ಯ ಖಾದ್ಯಗಳು
* ರಾಗಿ ಇಡ್ಲಿ
* ಬಿಸಿಬೇಳೆ ಬಾತ್
* ಉಪ್ಪಿಟ್ಟು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.