ADVERTISEMENT

ಚುಂಚನಗಿರಿ ಮಠದಲ್ಲಿ ಯುವ ವಿಜ್ಞಾನಿಗಳ ಕಲರವ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 20:15 IST
Last Updated 16 ಡಿಸೆಂಬರ್ 2019, 20:15 IST
ರಾಜ್ಯಮಟ್ಟದ 27ನೇ ರಾಷ್ಟ್ರೀಯ ವಿಜ್ಞಾನ ಸಮಾವೇಶದ ಅಂಗವಾಗಿ ಸೋಮವಾರ ಆದಿಚುಂಚನಗಿರಿ ಮಠದ ಪ್ರಮುಖ ಬೀದಿ ಕಂಡುಬಂದಿದ್ದು ಹೀಗೆ
ರಾಜ್ಯಮಟ್ಟದ 27ನೇ ರಾಷ್ಟ್ರೀಯ ವಿಜ್ಞಾನ ಸಮಾವೇಶದ ಅಂಗವಾಗಿ ಸೋಮವಾರ ಆದಿಚುಂಚನಗಿರಿ ಮಠದ ಪ್ರಮುಖ ಬೀದಿ ಕಂಡುಬಂದಿದ್ದು ಹೀಗೆ   

ನಾಗಮಂಗಲ: ತಾಲ್ಲೂಕಿನ ಆದಿಚುಂಚನಗಿರಿ ಮಠದ ಆವರಣದಲ್ಲಿ ಸೋಮವಾರ ಆರಂಭಗೊಂಡ ರಾಜ್ಯ
ಮಟ್ಟದ 27ನೇ ರಾಷ್ಟ್ರೀಯ ವಿಜ್ಞಾನ ಸಮಾವೇಶಕ್ಕೆ ಯುವ ವಿಜ್ಞಾನಿ ಎನ್‌.ಎಂ.ಪ್ರತಾಪ್‌ ಹಾಗೂ ಬಾಲ ವಿಜ್ಞಾನಿ ಕೆ.ಎಂ.ಪ್ರಥಮ್‌ ಚಾಲನೆ ನೀಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಜಿಲ್ಲಾಡಳಿತದ ವತಿಯಿಂದ ‘ಸ್ವಚ್ಛ, ಹಸಿರು, ಸ್ವಸ್ಥ ರಾಷ್ಟ್ರಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಹಾಗೂ ಆವಿಷ್ಕಾರಗಳು’ ವಿಷಯ ಕುರಿತು ಮೂರು ದಿನಗಳ ಸಮಾವೇಶ ಆಯೋಜಿಸಲಾಗಿದೆ. ಹೀಗಾಗಿ, ಮಠದ ಆವರಣದಲ್ಲಿ ಯುವ ವಿಜ್ಞಾನಿಗಳ ಕಲರವ ಏರ್ಪಟ್ಟಿತ್ತು.

ವಿವಿಧ ಜಿಲ್ಲೆಗಳಿಂದ ಬಂದಿದ್ದ ಕಿರಿಯ, ಹಿರಿಯರ (14–17ವರ್ಷ) ವಿಭಾಗದಲ್ಲಿ ರೂಪಿಸಿದ್ದ 10 ಮಾದರಿಗಳು ಸಮಾವೇಶದಲ್ಲಿ ಗಮನ ಸೆಳೆದವು. ವಿವಿಧ ಜಿಲ್ಲೆಗಳಿಂದ 800 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.

ADVERTISEMENT

ವಿಜ್ಞಾನಿ ಹಾಗೂ ವಿದ್ಯಾರ್ಥಿಗಳ ನಡುವೆ ನಡೆದ ನೇರ ಸಂವಾದದಲ್ಲಿ ವಿಜ್ಞಾನಿ ಡಾ.ಪಿ.ತಿಪ್ಪೇಸ್ವಾಮಿ ಪಾಲ್ಗೊಂಡಿದ್ದರು. ‘ದೇಶೀಯ ವೈಜ್ಞಾನಿಕ ಆಟಿಕೆಗಳಲ್ಲಿ ವಿಜ್ಞಾನ’ ವಿಷಯ ಕುರಿತು ನಡೆದ ಉಪನ್ಯಾಸದಲ್ಲಿ ಭೌತ ವಿಜ್ಞಾನ ಪ್ರಾಧ್ಯಾಪಕ ಕೆ.ರಾಜ್‌ಕುಮಾರ್ ಮಾತನಾಡಿದರು. ‘ಪವಾಡಗಳು ಮತ್ತು ವಿಜ್ಞಾನ’ ಕುರಿತು ಡಾ. ಹುಲಿಕಲ್‌ ನಟರಾಜ್ ಪ್ರಾತ್ಯಕ್ಷಿಕೆ ನೀಡಿದರು.

ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ, ರಾಜ್ಯ ವಿಜ್ಞಾನ ಪರಿಷತ್‌ ಅಧ್ಯಕ್ಷ ಎಸ್‌.ವಿ.ಸಂಕನೂರ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.