ಬೆಂಗಳೂರು: ಆತ್ಮಹತ್ಯೆಗೆ ಶರಣಾಗಿರುವ ಕಾನ್ಫಿಡೆಂಟ್ ಪ್ರಾಜೆಕ್ಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥ ಸಿ.ಜೆ.ರಾಯ್ ತಮ್ಮ ಕಂಪನಿಗಳ ಶೋಧನೆ ಹಾಗೂ ಜಪ್ತಿಗೆ ಕೊಚ್ಚಿಯ ಆದಾಯ ತೆರಿಗೆ ಇಲಾಖೆ ಕಳೆದ ವರ್ಷ ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ನಂತರ ಎರಡನೇ ದಿನದಲ್ಲಿ ಹಿಂಪಡೆದಿದ್ದರು.
ಕಾನ್ಫಿಡೆಂಟ್ ಪ್ರಾಜೆಕ್ಸ್ಟ್, ಕಾನ್ಫಿಡೆಂಟ್ ಏರ್ಲೈನ್ಸ್, ಕಾನ್ಫಿಡೆಂಟ್ ರೆಸಾರ್ಟ್ಸ್, ಕಾನ್ಫಿಡೆಂಟ್ ಎಂಟರ್ಟೈನ್ಮೆಂಟ್ ಸೇರಿದಂತೆ ಎಂಟು ಕಂಪನಿಗಳ ಶೋಧನೆ ಮತ್ತು ಜಪ್ತಿಗೆ ಕೇರಳದ ಕೊಚ್ಚಿಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯ ಪ್ರಧಾನ ನಿರ್ದೇಶಕರು 2025ರ ನವೆಂಬರ್ 27ರಂದು ಆದೇಶ ಹೊರಡಿಸಿದ್ದರು. ಡಿಸೆಂಬರ್ 3ರಂದು ಪಂಚನಾಮೆ ನಡೆಸಿದ್ದರು.
‘ಶೋಧನೆಯ ಆದೇಶ ಮತ್ತು ಪಂಚನಾಮೆಯನ್ನು ಅಕ್ರಮ ಎಂದು ಘೋಷಿಸಿ, ರದ್ದುಪಡಿಸಬೇಕು’ ಎಂದು ಕೋರಿ ಎಂಟು ಕಂಪನಿಗಳು ಮತ್ತು ಸಿ.ಜೆ.ರಾಯ್ 2025ರ ಡಿಸೆಂಬರ್ 16ರಂದು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಡಿಸೆಂಬರ್ 18ರಂದು ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆ ರಾಯ್ ಪರ ವಕೀಲರು ಹಾಜರಾಗಿ, ಅರ್ಜಿ ಹಿಂಪಡೆಯಲು ಮತ್ತು ನಂತರ ಪ್ರಶ್ನಿಸಲು ಅನುಮತಿ ನೀಡುವಂತೆ ಕೋರಿ ಮೆಮೊ ಸಲ್ಲಿಸಿದ್ದರು. ಇದನ್ನು ಮಾನ್ಯ ಮಾಡಿದ್ದ ನ್ಯಾಯಪೀಠ ಅರ್ಜಿ ಹಿಂಪಡೆಯಲು ಅರ್ಜಿದಾರರಿಗೆ ಅನುಮತಿ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.