ADVERTISEMENT

ಡಿಜೆ ಹಳ್ಳಿ ಗಲಭೆ ಪ್ರಕರಣ| ಕ್ಲೇಮ್ ಕಮಿಷನರ್ ಆಗಿ ನ್ಯಾ. ಎಚ್‌.ಎಸ್. ಕೆಂಪಣ್ಣ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 3:26 IST
Last Updated 29 ಆಗಸ್ಟ್ 2020, 3:26 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಡಿ.ಜೆ. ಹಳ್ಳಿ, ಕೆ.ಜಿ.ಹಳ್ಳಿ ಗಲಭೆಯಿಂದ ಆಗಿರುವ ಹಾನಿಯನ್ನು ಗಲಭೆಕೋರರಿಂದ ವಸೂಲಿ ಮಾಡುವ ನಿಟ್ಟಿನಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್.ಕೆಂಪಣ್ಣ ಅವರನ್ನು ಕ್ಲೇಮ್ ಕಮಿಷನರ್ ಆಗಿ ಹೈಕೋರ್ಟ್‌ ನೇಮಕ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ, 2009ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಆಧರಿಸಿ ಕ್ಲೇಮ್ ಕಮಿಷನರ್ ನೇಮಿಸಿ ಆದೇಶ ಹೊರಡಿಸಿದೆ.ಅಗತ್ಯ ಮೂಲಸೌಕರ್ಯ ಕಲ್ಪಿಸುವ ಸಂಬಂಧನ್ಯಾಯಮೂರ್ತಿ ಕೆಂಪಣ್ಣ ಅವರನ್ನು ಸಂಪರ್ಕಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಸಾಂಕ್ರಾಮಿಕ ರೋಗ ಇರುವ ಕಾರಣ ಹೇಳಿಕೆ ದಾಖಲಿಸುವುದು ಮತ್ತುವಿಚಾರಣೆಗಳನ್ನು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಲು ಮುಕ್ತ ಅವಕಾಶ ನೀಡಲಾಗಿದೆ. ‘ಎಫ್‌ಐಆರ್ ಸರಿಪಡಿಸುವ ವಿಷಯಕ್ಕೆ ನಾವು ಹೋಗುವುದಿಲ್ಲ. ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿ ಬಗ್ಗೆಯಷ್ಟೇ ಗಮನ ಹರಿಸಲಿದ್ದೇವೆ’ ಎಂದು ಪೀಠ ಸ್ಪಷ್ಟಪಡಿಸಿತು.

ADVERTISEMENT

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಕ್ಲೇಮ್ ಕಮಿಷನರ್ ವರದಿ ಸಲ್ಲಿಸಿದ ನಂತರ ಎರಡೂ ಕಡೆಯವರ ವಿಚಾರಣೆ ನಡೆಸಿ ಹೊಣೆಗಾರಿಕೆಯನ್ನು ಹೈಕೋರ್ಟ್ ನಿರ್ಧರಿಸಬೇಕಾಗುತ್ತದೆ.

‘ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಸ್ಥಾನಮಾನ ಪರಿಗಣಿಸಿ ಕ್ಲೇಮ್ ಕಮಿಷನರ್ ವೇತನ ಮತ್ತು ಅಗತ್ಯ ಸಿಬ್ಬಂದಿಯನ್ನು ನಿಗದಿ ಮಾಡಬೇಕು. ವಿಶೇಷವಾಗಿ ಆಸ್ತಿ ಮೌಲ್ಯಮಾಪಕರನ್ನು ನೇಮಕ ಮಾಡಬೇಕು’ ಎಂದು ಪೀಠ ನಿರ್ದೇಶನ ನೀಡಿತು.

‘ಖಾಸಗಿ ಮತ್ತು ಸಾರ್ವಜನಿಕ ಆಸ್ತಿ ಹಾನಿ ಅಂದಾಜು ಮಾಡಬೇಕಿರುವ ಕಾರಣ ಹಾನಿಗೊಳಗಾದ ವ್ಯಕ್ತಿಗಳು ಕ್ಲೇಮ್ ಕಮಿಷನರ್ ಮುಂದೆ ವಿವರಗಳನ್ನು ನೀಡಬೇಕು ಎಂಬ ಪ್ರಚಾರವನ್ನು ರಾಜ್ಯ ಸರ್ಕಾರ ಮಾಡಬೇಕು. ಜಾಹೀರಾತು ಪ್ರಕಟಿಸುವ ಮುನ್ನ ಕ್ಲೇಮ್ ಕಮಿಷನರ್ ಅವರ ಅನುಮೋದನೆ ಪಡೆಯಬೇಕು’ ಎಂದು ಪೀಠ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.