ADVERTISEMENT

ಗೋಕರ್ಣ ದೇಗುಲ: ಭಕ್ತರು, ಸಿಬ್ಬಂದಿ ನಡುವೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 20:00 IST
Last Updated 29 ಡಿಸೆಂಬರ್ 2018, 20:00 IST
   

ಕಾರವಾರ: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ, ವಸ್ತ್ರ ಸಂಹಿತೆ ಪಾಲನೆ ಸಂಬಂಧ ಭಕ್ತರು ಮತ್ತು ದೇವಸ್ಥಾನದ ಸಿಬ್ಬಂದಿ ನಡುವೆ ಶುಕ್ರವಾರ ರಾತ್ರಿ ವಾಗ್ವಾದ ನಡೆದಿದೆ.

ದೇವಸ್ಥಾನಕ್ಕೆ ಭೇಟಿ ನೀಡಲು ಬಂದಿದ್ದ ಮಹಾರಾಷ್ಟ್ರದ ಕುಟುಂಬವೊಂದರ ಸದಸ್ಯರು ‘ಬರ್ಮುಡಾ’ ಧರಿಸಿದ್ದರು. ಅವರನ್ನು ಪ್ರವೇಶ ದ್ವಾರದಲ್ಲೇ ಭದ್ರತಾ ಸಿಬ್ಬಂದಿ ತಡೆದು, ಭಾರತೀಯ ಸಂಪ್ರದಾಯದಂತೆ ಉಡುಪು ಧರಿಸಿ ಬರುವಂತೆ ಸೂಚಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಭಕ್ತರು, ದೇವಸ್ಥಾನದ ಒಳಹೋಗಿಯೇ ತೀರುವುದಾಗಿ ಪಟ್ಟು ಹಿಡಿದರು. ಅಲ್ಲದೇ ಭದ್ರತಾ ಸಿಬ್ಬಂದಿ ಜತೆ ತೀವ್ರ ವಾಗ್ವಾದ ನಡೆಸಿದರು. ಈ ಸಂದರ್ಭದಲ್ಲಿ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋದರು. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೊನೆಗೆ ಭಕ್ತರು ಪ್ರಸಾದ ಪಡೆದು ವಾಪಸಾದರು. ವಾಗ್ವಾದ ಕುರಿತುಯಾರಿಂದಲೂ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಗೋಕರ್ಣ ದೇಗುಲವನ್ನು ಮೂರು ತಿಂಗಳ ಹಿಂದೆ ಮುಜರಾಯಿ ಇಲಾಖೆಗೆ ಹಸ್ತಾಂತರಿಸಿದಾಗ, ಸರ್ಕಾರದ ಆಡಳಿತಾಧಿಕಾರಿ ವಸ್ತ್ರಸಂಹಿತೆ ಜಾರಿ ಮಾಡಿದ್ದರು. ಈಗ ದೇವಸ್ಥಾನದ ಆಡಳಿತ ನಡೆಸುತ್ತಿರುವ ರಾಮಚಂದ್ರಾಪುರ ಮಠವೂ ಅದನ್ನು ಮುಂದುವರಿಸಿಕೊಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.