ಬೆಂಗಳೂರು: ಏ.14ಕ್ಕೆ ಲಾಕ್ಡೌನ್ ಮುಗಿದ ನಂತರ ಕೋವಿಡ್–19 ಅತಿ ಹೆಚ್ಚು ಪ್ರಕರಣಗಳಿರುವ ಜಿಲ್ಲೆಗಳನ್ನು ‘ಕ್ಲಸ್ಟರ್’ ಎಂದು ಪರಿಗಣಿಸಿ, ಅಲ್ಲಿ ಇನ್ನೂ ಹೆಚ್ಚು ಕಠಿಣ ಸ್ವರೂಪದಲ್ಲಿ ಲಾಕ್ಡೌನ್ ಮುಂದುವರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಆದರೆ, ಹಲವು ರಾಜ್ಯಗಳು ಲಾಕ್ಡೌನ್ ಇನ್ನಷ್ಟು ದಿನಗಳ ಕಾಲ ಮುಂದುವರಿಸುವಂತೆ ಒತ್ತಾಯಿಸಿವೆ. ರಾಜ್ಯಗಳ ಜತೆ ಮಾತುಕತೆ ನಡೆಸಿ, ಇದೇ 10ರಿಂದ 12 ರೊಳಗೆ ನಿರ್ಣಯ ಪ್ರಕಟಿಸುವ ಸಾಧ್ಯತೆ ಇದೆ ಎಂದು ಕರ್ನಾಟಕ ಸರ್ಕಾರದ ಮೂಲಗಳು ತಿಳಿಸಿವೆ.
ಜನ ಬೇಕಾಬಿಟ್ಟಿ ಬೀದಿಗೆ ಬರುವುದನ್ನು ತಡೆಗಟ್ಟಲು ಅರೆ ಸೇನಾಪಡೆಗಳನ್ನು ಬಳಸುವ ಬಗ್ಗೆಯೂ ಚಿಂತನೆ ನಡೆದಿದೆ.
ರೈಲು ಸಂಚಾರ:ರೈಲು ಮತ್ತು ವಿಮಾನ ಸಂಚಾರಕ್ಕೆ ಅವಕಾಶ ನೀಡಿದರೆ ಕೊರೊನಾ ವೈರಸ್ ಮತ್ತಷ್ಟು ಹರಡುವ ಸಾಧ್ಯತೆ ಇರುವುದರಿಂದ ಇವೆರಡಕ್ಕೂ ಅನುಮತಿ ನೀಡುವ ಸಾಧ್ಯತೆ ಕ್ಷೀಣವಾಗಿದೆ. ಒಂದು ವೇಳೆ ಲಾಕ್ಡೌನ್ ಮುಂದುವರಿಸಿದರೆ, ಇತರ ವಾಹನಗಳ ಸಂಚಾರಕ್ಕೂ ಕಡಿವಾಣ ಬೀಳಲಿದೆ.
6 ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಕೆ:‘ಕೋವಿಡ್–19 ಕೆಂಪು ವಲಯದ ಪಟ್ಟಿಯಲ್ಲಿರುವಬೆಂಗಳೂರು ನಗರ, ಮೈಸೂರು, ಚಿಕ್ಕಬಳ್ಳಾಪುರ, ಬೀದರ್, ದಕ್ಷಿಣಕನ್ನಡ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಯಲಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ‘ಉಳಿದ ಜಿಲ್ಲೆಗಳಲ್ಲಿ ಲಾಕ್ಡೌನ್ ಅನ್ನು ಹಂತ ಹಂತವಾಗಿ ಅಂದರೆ ಮೇ 1 ರವರೆಗೆ ಸಡಿಲಿಸಲಾಗುವುದು. ಸಾರ್ವಜನಿಕರ ರಕ್ಷಣೆಗಾಗಿ ಲಾಕ್ಡೌನ್ ಮುಂದುವರಿಸಬೇಕು’ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.