ADVERTISEMENT

ಅಸ್ಮಿತೆಗೆ ಧಕ್ಕೆಯಾದರೆ ಹಿಂದೂಗಳು ಸಿಡಿದೇಳುತ್ತಾರೆ: ಸತೀಶ ಹೇಳಿಕೆಗೆ ಸಿ.ಎಂ ಕಿಡಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 19:44 IST
Last Updated 8 ನವೆಂಬರ್ 2022, 19:44 IST
 ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಶಿರಹಟ್ಟಿ (ಗದಗ ಜಿಲ್ಲೆ): ‘ಹಿಂದೂ ಪದಕ್ಕೆ ಕೆಟ್ಟ ಅರ್ಥವಿದೆ’ ಎಂದಿರುವ ಸತೀಶ ಜಾರಕಿಹೊಳಿ ಚಿಂತನೆ, ಯೋಚನೆಯಲ್ಲಿಯೇ ಹೊಲಸಿದೆ. ಅವರ ಆ ಗುಣವೇ ಈ ಮೂಲಕ ಅಭಿವ್ಯಕ್ತಗೊಂಡಿದೆ. ಸನಾತನ ಧರ್ಮವೊಂದರ ಬುನಾದಿಯನ್ನು ಪ್ರಶ್ನಿಸುವ ರೀತಿಯಲ್ಲಿ ಮಾತನಾಡಿರುವುದು ಖಂಡನೀಯ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ವೇದ ಪುರಾಣಗಳಿಂದ ಇಲ್ಲಿಯವರೆಗೂ ಹಿಂದೂಸ್ತಾನ ಹಿಂದೂಗಳಿಗೆ ಸೇರಿದ್ದು ಎಂದು ಎಲ್ಲರೂ ಹೇಳಿಕೊಂಡೇ ಬಂದಿದ್ದಾರೆ. ನೆಹರೂ ಕೂಡ ಇದೇ ಮಾತು ಹೇಳಿದ್ದಾರೆ. ಆದರೆ, ಕಾಂಗ್ರೆಸ್ಸಿಗರು ನೆಹರೂ ಹೇಳಿಕೆಯನ್ನೂ ಒಪ್ಪಿಕೊಳ್ಳಲು ತಯಾರಿಲ್ಲ’ ಎಂದರು.

‘ಅಧಿಕಾರಕ್ಕಾಗಿ, ವೋಟಿಗಾಗಿ, ಅಲ್ಪಸಂಖ್ಯಾತರವನ್ನು ಓಲೈಸುವ ಸಲುವಾಗಿ ಇಡೀ ದೇಶದ ಹಿಂದೂಗಳನ್ನು ಅವ
ಮಾನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ’ ಎಂದರು.

ADVERTISEMENT

‘ಸ್ವಾಭಿಮಾನ ಹಾಗೂ ಅಸ್ಮಿತೆಗೆ ಧಕ್ಕೆ ಬಂದರೆ ಹಿಂದೂಗಳು ಸಿಡಿದೇಳು ತ್ತಾರೆ. ಸತೀಶ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸುವುದಷ್ಟೇ ಅಲ್ಲ; ಇದಕ್ಕೆ ಕೊನೆ ಹಾಡುವಂತಹ ಕಾರ್ಯಕ್ರಮವನ್ನು ಬಿಜೆಪಿ ಹಮ್ಮಿಕೊಳ್ಳಲಿದೆ’ ಎಂದು ಹೇಳಿದರು.

ಬ್ಯಾಡಗಿಯಲ್ಲಿ ಮಾತನಾಡಿದ ಅವರು, ‘ಜಾರಕಿಹೊಳಿ ಅವರೇ ನಿಮ್ಮ ಜಾತಿ ಪ್ರಮಾಣಪತ್ರದಲ್ಲಿ ಹಿಂದೂ ಎಂಬ ಶಬ್ದವಿಲ್ಲವೇ? ಹಿಂದೂ ಆಗಿ ಹುಟ್ಟಿ, ವಿದ್ಯೆ ಕಲಿತು, ಶಾಸಕರಾಗಿ, ಸಚಿವರಾಗಿರುವ ನೀವು ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಮತ್ತು ಮತ ಗಳಿಕೆಗಾಗಿ ಇಂಥ ಹೇಳಿಕೆ ನೀಡಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದೀರಿ’ ಎಂದು ತಿರುಗೇಟು ನೀಡಿದರು.

ಸಂಜೆ ಹೊಸದುರ್ಗದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ‘ಸತೀಶ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಚರ್ಚೆ, ಕ್ಷಮೆ ಬೇಕಾಗಿಲ್ಲ. ಜನರು ತೀರ್ಮಾನ ಮಾಡಲಿದ್ದಾರೆ’ ಎಂದರು.

ಇವನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.