ADVERTISEMENT

ಗಂಗಾಮತಸ್ಥರಿಗೆ ST ಮೀಸಲಾತಿ ಸೌಲಭ್ಯ ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ: ಸಿಎಂ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 23:52 IST
Last Updated 15 ಜನವರಿ 2023, 23:52 IST
ಹಾವೇರಿ ತಾಲ್ಲೂಕಿನ ನರಸೀಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 5ನೇ ಶರಣ ಸಂಸ್ಕೃತಿ ಉತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಂಕೇತಿಕವಾಗಿ ತೆಪ್ಪವನ್ನು ಹುಟ್ಟು ಹಾಕಿ ಉದ್ಘಾಟಿಸಿದರು. ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಸಚಿವ ಸಿ.ಸಿ.ಪಾಟೀಲ, ಲಾಲಾಜಿ ಮೆಂಡನ್‌ ಇದ್ದಾರೆ       –ಪ್ರಜಾವಾಣಿ ಚಿತ್ರ
ಹಾವೇರಿ ತಾಲ್ಲೂಕಿನ ನರಸೀಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 5ನೇ ಶರಣ ಸಂಸ್ಕೃತಿ ಉತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಂಕೇತಿಕವಾಗಿ ತೆಪ್ಪವನ್ನು ಹುಟ್ಟು ಹಾಕಿ ಉದ್ಘಾಟಿಸಿದರು. ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಸಚಿವ ಸಿ.ಸಿ.ಪಾಟೀಲ, ಲಾಲಾಜಿ ಮೆಂಡನ್‌ ಇದ್ದಾರೆ       –ಪ್ರಜಾವಾಣಿ ಚಿತ್ರ   

ಹಾವೇರಿ: ‘ಅಂಬಿಗರ ಸಮಾಜಕ್ಕೆ (ಗಂಗಾಮತಸ್ಥರು) ಪರಿಶಿಷ್ಟ ಪಂಗಡದ (ಎಸ್‌ಟಿ) ಮೀಸಲಾತಿ ಸೌಲಭ್ಯ ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸಮಾಜದ ಬೇಡಿಕೆಯನ್ನು ಈಡೇರಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದರು.

ತಾಲ್ಲೂಕಿನ ನರಸೀಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 5ನೇ ಶರಣ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಪರಿಶಿಷ್ಟ ಪಂಗಡದ ಮೀಸಲಾತಿ ಅಡಿ ಪರಿಗಣಿಸಲು ಕೇಂದ್ರ ಸಚಿವ ಅರ್ಜುನ್‌ ಮುಂಡಾ ಅವರನ್ನು ಭೇಟಿ ಮಾಡಿ ಈಗಾಗಲೇ ಚರ್ಚಿಸಲಾಗಿದೆ. ಕೇಂದ್ರದ ಕಾನೂನು ಸಚಿವಾಲಯವು ಕೆಲವು ಸ್ಪಷ್ಟೀಕರಣ ಕೇಳಿದೆ. ಅದನ್ನು ರಾಜ್ಯದಿಂದ ಒದಗಿಸಲಾಗಿದೆ. ಎಲ್ಲ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ’ ಎಂದು ತಿಳಿಸಿದರು.

ADVERTISEMENT

₹5 ಕೋಟಿ ಅನುದಾನ: ‘ಅಂಬಿಗರ ಸಮಾಜದ ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಪ್ರಗತಿಗಾಗಿ ಅಂಬಿಗರ ಚೌಡಯ್ಯನವರ ಮಠಕ್ಕೆ ₹10 ಕೋಟಿ ಅನುದಾನ ಘೋಷಿಸಿದ್ದು, ಸದ್ಯ ₹5 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಶೀಘ್ರ ಬಾಕಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಗಂಗಾಮತದ ಜಿಲ್ಲಾ ಸಮುದಾಯ ಭವನಕ್ಕೆ ಈ ಬಜೆಟ್‍ನಲ್ಲಿ ಅನುದಾನ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

‘ನೀವು ಗಂಗಾ ಮಾತೆಯ ಮಕ್ಕಳು. ನಾನು ಗಂಗಾ ಮಾತೆ ಮಗ. ನನ್ನ ತಾಯಿ ಗಂಗಮ್ಮ. ನಾವೆಲ್ಲರು ಗಂಗಾ ಮಾತೆಯ ಮಕ್ಕಳು. ಸದಾ ಕಾಲ ಗಂಗಾ ಮಾತೆ ಮಗನಾಗಿ ಗಂಗಾಮತಸ್ಥರ ಭಕ್ತನಾಗಿ ಇರುವೆ’ ಎಂದು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಭಾವುಕರಾದರು.

ಸಮಾರಂಭದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮಚೌಡಯ್ಯ ಸ್ವಾಮೀಜಿ, ಫಕೀರದಿಂಗಾಲೇಶ್ವರಶ್ರೀ, ಶಾಂತ ಗಂಗಾಧರಶ್ರೀ , ಶರಣಬಸವಶ್ರೀ, ಸಚಿವ ಬಿ.ಸಿ.ಪಾಟೀಲ, ಶಾಸಕರಾದ ನೆಹರು ಓಲೇಕಾರ, ಶ್ರೀನಿವಾಸ ಮಾನೆ, ವಿರೂಪಾಕ್ಷಪ್ಪ ಬಳ್ಳಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.