ಬೆಂಗಳೂರು: ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಧ್ವಜಾರೋಹಣ ನಡೆಸಲು ಸಾಧ್ಯವಾಗುವುದಿಲ್ಲವೇ? ಅವರು ಕೋವಿಡ್ನಿಂದ ಗುಣಮುಖರಾದರೂ ಮನೆಯಲ್ಲಿ 14 ದಿನಗಳು ಪ್ರತ್ಯೇಕವಾಸ ಅನುಭವಿಸಬೇಕಾಗುತ್ತದೆಯೇ?
ರಾಜ್ಯದಲ್ಲಿ ಪ್ರಸ್ತುತ ಕೊರೊನಾ ಸೋಂಕಿತರು ಗುಣಮುಖರಾದ ಬಳಿಕವೂ 14 ದಿನ ಮನೆಯಲ್ಲೇ ಪ್ರತ್ಯೇಕ ವಾಸ ಅನುಭವಿಸುವುದು ಕಡ್ಡಾಯ. ಹಾಗಾಗಿ ಈ ವಿಚಾರ ಜಿಜ್ಞಾಸೆಗೆ ಕಾರಣವಾಗಿದೆ.
ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಗುರುವಾರ ಉತ್ತರಿಸಿದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ‘ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ’ ಎಂದರು.
‘ಸರ್ಕಾರದ ಆಡಳಿತದ ಭಾಗವಾಗಿರುವ ಯಾರಿಗಾದರೂ ಕೋವಿಡ್ ಸೋಂಕು ದೃಢಪಟ್ಟರೆ, ರೋಗ ವಾಸಿಯಾದ ತಕ್ಷಣವೇ ಅವರು ಕರ್ತವ್ಯಕ್ಕೆ ಮರಳಬಹುದು. ಅವರಿಗೆ 14 ದಿನಗಳ ಪ್ರತ್ಯೇಕ ವಾಸ ಕಡ್ಡಾಯವಲ್ಲ. ಆಡಳಿತ ಯಂತ್ರ ಹಳಿ ತಪ್ಪಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ತಿಂಗಳ ಹಿಂದೆಯೇ ಈ ಕುರಿತ ಮಾರ್ಗಸೂಚಿ ಹೊರಡಿಸಿದೆ. ಅನೇಕ ಅಧಿಕಾರಿಗಳು ಕೋವಿಡ್ ಗುಣಮುಖವಾದ ತಕ್ಷಣವೇ ಕರ್ತವ್ಯಕ್ಕೆ ಮರಳಿದ್ದಾರೆ’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.