
ಬೆಂಗಳೂರು: ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ವಿಚಾರದಲ್ಲಿ ಅಹಿಂದ ಸಂಘಟನೆಗಳು ಸಿದ್ದರಾಮಯ್ಯ ಪರವಾಗಿ ಲಾಬಿಗೆ ಇಳಿದಿದ್ದು, ಒಕ್ಕಲಿಗ ಮಠ–ಸಂಘಟನೆಗಳ ಬೆದರಿಕೆಗೆ ಜಗ್ಗುವುದಿಲ್ಲ ಎಂದಿವೆ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಿದರೆ ಅಹಿಂದ ಸಮುದಾಯದವರು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿವೆ.
ಒಕ್ಕಲಿಗ ಸಂಘವು ಡಿ.ಕೆ.ಶಿವಕುಮಾರ್ ಅವರ ಪರ ಗುರುವಾರ ಮಾತನಾಡಿದ ಬೆನ್ನಲ್ಲೇ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ತುರ್ತು ಸುದ್ದಿಗೋಷ್ಠಿ ಕರೆಯಿತು.
ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ‘ಅಹಿಂದ ಸಮುದಾಯದ ಜನರು ಮತ ನೀಡಿರುವುದರಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಒಕ್ಕಲಿಗ ಸಮುದಾಯದ ಮಠಗಳು ಮತ್ತು ಸಂಘಗಳು ಅವರ ನಾಯಕರ ಪರವಾಗಿ ಲಾಬಿ ಮಾಡುವುದಾದರೆ, ನಾವು ಅಹಿಂದ ನಾಯಕರ ಪರವಾಗಿ ಅಖಾಡಕ್ಕೆ ಇಳಿಯುತ್ತೇವೆ’ ಎಂದರು.
‘ರಾಜ್ಯದಲ್ಲಿ ಅಹಿಂದ ಸಮುದಾಯದವರೇ ಬಹುಸಂಖ್ಯಾತರು ಎಂಬುದನ್ನು ಸಾಬೀತುಪಡಿಸಿದ್ದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ವರದಿಯ ಶಿಫಾರಸುಗಳು ಜಾರಿ ಆಗದಂತೆ ಪ್ರಬಲ ಸಮುದಾಯದವರು ನೋಡಿಕೊಂಡರು. ಸ್ವಾತಂತ್ರ್ಯ ಬಂದಾಗಿನಿಂದಲೂ ಈ ರೀತಿಯ ಬೆದರಿಕೆ, ದಬ್ಬಾಳಿಕೆಗಳನ್ನು ನಡೆಸಿಕೊಂಡೇ ಬಂದಿದ್ದಾರೆ. ಆದರೆ ಈಗ ಅವರ ಬೆದರಿಕೆಗೆ ಜಗ್ಗುವಂತಹ ಪರಿಸ್ಥಿತಿ ಇಲ್ಲ’ ಎಂದರು.
‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ನಾವು ಅವಕಾಶ ಕೊಡುವುದಿಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ರಾಜ್ಯದಲ್ಲಿ ಮೇಲ್ವರ್ಗ ಮತ್ತು ಕೆಳವರ್ಗಗಳ ಮಧ್ಯೆ ಸಂಘರ್ಷ ಉಂಟಾಗುತ್ತದೆ. ಕಾಂಗ್ರೆಸ್ ಹೈಕಮಾಂಡ್ ಅದಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ಆಗ್ರಹಿಸಿದರು.
‘ಡಿ.ಕೆ.ಶಿವಕುಮಾರ್ ಅವರ ಶ್ರಮಕ್ಕೆ ಕೂಲಿ ಕೊಡಿ ಎಂದು ಒಕ್ಕಲಿಗರ ಸಂಘದವರು ಆಗ್ರಹಿಸಿದ್ದಾರೆ. ಶಿವಕುಮಾರ್ ಅವರಿಗೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆಯಲ್ಲ’ ಎಂದರು.
‘ಸಿ.ಎಂ ಸ್ಥಾನ ಬಿಡಿ’
ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂದು ಸ್ಫಟಿಕಪುರಿ ಮಹಾ ಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಆಗ್ರಹಿಸಿದ್ದಾರೆ. ಒಕ್ಕಲಿಗರ ಸಂಘವೂ ಈ ಮಾತಿಗೆ ಧ್ವನಿಗೂಡಿಸಿದೆ. ಸುದ್ದಿಗಾರರ ಜತೆ ಮಾತನಾಡಿರುವ ಸ್ವಾಮೀಜಿ ‘ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂಬುದು ಒಕ್ಕಲಿಗ ಸಮುದಾಯದ ಒತ್ತಾಸೆ. ಅದನ್ನೇ ಆದಿಚುಂಚನಗಿರಿ ಶ್ರೀಗಳು ಹೇಳಿದ್ದಾರೆ. ಇದರಲ್ಲಿ ರಾಜಕೀಯ ಏನೂ ಇಲ್ಲ. ತಮ್ಮ ಸಮುದಾಯದವರಿಗೆ ಅವಕಾಶ ಕೈತಪ್ಪುವಾಗ ಸ್ವಾಮೀಜಿಗಳು ಮಾತನಾಡುವುದು ಸಹಜ’ ಎಂದರು.
ಅಲ್ಲದೇ ‘ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡುತ್ತೇವೆ ಎಂದು ಪಕ್ಷದ ಹಿರಿಯರು ಮಾತು ಕೊಟ್ಟಿದ್ದರು. ಆ ಮಾತನ್ನು ಅವರು ಈಗ ಉಳಿಸಿಕೊಳ್ಳಬೇಕು. ಮುಖ್ಯಮಂತ್ರಿ ಆಗಲು ಶಿವಕುಮಾರ್ ಅವರಿಗೆ ಒಂದು ಅವಕಾಶ ಕೊಡಬೇಕು’ ಎಂದಿದ್ದಾರೆ
‘ಶ್ರಮಕ್ಕೆ ಕೂಲಿ ಕೊಡಿ’
‘ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಡಿ.ಕೆ.ಶಿವಕುಮಾರ್ ಅವರು ಹಾಕಿರುವ ಶ್ರಮಕ್ಕೆ ಪಕ್ಷವು ಕೂಲಿ ಕೊಡಬೇಕು. ಅವರು ಮುಖ್ಯಮಂತ್ರಿ ಆಗಲು ಹೈಕಮಾಂಡ್ ಅವಕಾಶ ನೀಡಬೇಕು’ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸಿದ್ದು ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಅಧಿಕ ಸ್ಥಾನಗಳನ್ನು ಗೆಲ್ಲಲು ಕಾರಣರಾಗಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಶಿವಕುಮಾರ್ಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು. ಒಂದು ವೇಳೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗದಿದ್ದರೆ ಸಮುದಾಯದ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಸಂಘದ ಮಾಜಿ ಅಧ್ಯಕ್ಷ ಬಿ.ಕೆಂಚಪ್ಪಗೌಡ ‘ಶಿವಕುಮಾರ್ ಅವರು ಚುನಾವಣೆ ವೇಳೆ ಪೆನ್ನು ಪೇಪರ್ ಕೊಡಿ ಎಂದು ಕೇಳಿದ್ದರು. ಅದರಂತೆ ಒಕ್ಕಲಿಗ ಸಮುದಾಯ ಅವರ ಪಕ್ಷವನ್ನು ಬೆಂಬಲಿಸಿತ್ತು. ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಮುಖ್ಯಮಂತ್ರಿ ಆಗುವ ಪರಿಪಾಟ ಇದೆ. ಹಾಗಾಗಿ ಸಮುದಾಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ’ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಗಂಗಾಧರ್ ಉಪಾಧ್ಯಕ್ಷರಾದ ರೇಣುಕ ಪ್ರಸಾದ್ ಎಂ.ಪುಟ್ಟಸ್ವಾಮಿ ಖಜಾಂಚಿ ಕೆ.ವಿ.ಶ್ರೀಧರ್ ಸಂಘದ ನಿರ್ದೇಶಕರಾದ ವೆಂಕಟರಾಮೇಗೌಡ ಹನುಮಂತರಾಯಪ್ಪ ಬಿ.ಪಿ.ಮಂಜೇಗೌಡ ಸುದ್ದಿಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.